Monday, August 24, 2020

ಕೊವಿಡ್ ಕಾಲದ ಗಣಪಗೆ

ಮಾಸ್ಕು ಹಾಕ್ಕೊಂಡ್ ಮಾರ್ಕೆಟ್ಗೋಗಿ
ಬಣ್ಣಾ ಬಣ್ಣದ್ ಹೂವಾ ತಂದು
ಸೋಪಿನ್ ನೀರಾಗ್ ತಿಕ್ಕೀ ತೊಳ್ದು
ನಿನ್ನಾ ಮುಡಿಗೆ ಇಟ್ಟೀವ್ನಿ

ಎಷ್ಟೇ ಕಾಸ್ಟ್ಲೀ ಆಗಿದ್ರೂನೂ
ಹಬ್ಬಾ ಅಂದ್ರೆ ಬಿಡ್ಲಿಕ್ಕಿಲ್ಲ
ಥರಥರದ್ ಹಣ್ಣಾ ಕೊಂಡು ತಂದು
ಉಪ್ಪಿನ ನೀರಲಿ ತೊಳೆದಿವ್ನಿ

ವೈರಸ್ಸೆಲ್ಲಾ ಸತ್ತೋಗ್ಲಿ ಅಂತ
ಮೋದಕ ಚಕ್ಕುಲಿ ಪಂಚ್ಕಜ್ಜಾಯ
ಎರ್ಡೆರ್ಡ್ ಸರ್ತಿ ಹುರ್ದು ಕರ್ದು
ನೈವೇದ್ಯಕ್ಕೆ ಮಡಗೀವ್ನಿ

ಕರ್ಪೂರೇನೂ ಊದ್ಬತ್ಯೇನು
ಬತ್ತಿ ಸೈತ ಸ್ಯಾನಿಟೈಸ್ ಮಾಡಿ
ಮಂಟಪಾ ಕಟ್ವಾಗ್ ದೂರ್ದೂರ್ ನಿಂತು
ಎಲ್ಲಾ ಕ್ರಮ ತಗೊಂಡೀವಿ

ಕ್ವಾರಂಟೈನಲ್ ಇರೋ ನಾವು
ಸಂದ್‌ಸಂದ್ ಬಟ್ಟೇ ತೊಟ್ಟೂಕೊಂಡು
ಸೊಂಡ್ಲಾ ಗಣಪ್ನೇ ಕಾಯೋ ಅಂತ
ನಿನ್ ಮುಂದ್ ಬಂದು ಅಡ್ಡಾಗೀವಿ

ಕಷ್ಟಾನೆಲ್ಲಾ ಕಳೀತೀಯಂತೆ
ಯಿಘ್ನಾನೆಲ್ಲಾ ತೊಡೀತೀಯಂತೆ
ಈ ಕೊರೋನಾ ಏನು ದೊಡ್ದು ನಿಂಗೆ
ಹೊಡ್ದೋಡ್ಸದ್ನಾ ಕೈ ಮುಗಿತೀವಿ

ಜೈಜೈ ಗಣಪಾ ಜೈಜೈ ಗಣಪಾ
ಸಿವನಾ ಮಗನೇ ಹರಸೋ ಯಪ್ಪಾ
ಮೊದ್ಲೀನಂಗೆ ಎಲ್ಲಾ ಮರಳಿಸಿ
ನಗುವಿನ ಹೂವಾ ಅರಳಿಸೋ ಗಣಪಾ.

Friday, July 31, 2020

ಸಹಸ್ರಪದಿ

ಮೈ ಚಳಿ ಬಿಟ್ಟು ನಡೆದಿದ್ದರೆ
ಯಾವ ಉರಗಕ್ಕೂ ಕಮ್ಮಿಯಿಲ್ಲ
ಹತ್ತಿರದಿಂದ ನೋಡಿದರೆ
ಬೆಚ್ಚಿ ಬೀಳಿಸುವಂತಹ ಮೈಮಾಟ
ಕಪ್ಪು-ಕಂದು ಬಣ್ಣಗಳ ಹೊತ್ತು
ಸಾವಿರ ಪಾದಗಳ ಊರಿ
ನಡೆವೆ ನೋಡುತ್ತ ಅತ್ತ ಇತ್ತ ಸುತ್ತ ಮುತ್ತ
ಮೀಸೆಯಲ್ಲಾಡಿಸುತ್ತ ಲಯಬದ್ಧ

ಮೊಂಡಾಗಿ ಜಗತ್ತನ್ನೆದುರಿಸಲು
ಎಲ್ಲರಿಗೂ ಧೈರ್ಯವಿಲ್ಲವೈ
ಬೆಂಬಿಡದ ನಾಚಿಕೆ
ಏನು ಮಾಡಲೂ ಹಿಂಜರಿಕೆ
ಅಂತರ್ಮುಖಿಯಾಗಿ
ನೆಲವ ನೋಡುತ್ತ ನಡೆವೆ
ಸಿಕ್ಕ ಚಿಗುರು-ಸಸ್ಯಶೇಷಗಳನೇ
ಮೃಷ್ಟಾನ್ನವೆಂದು ತಿನ್ನುವೆ
ಅವರಾಗಿಯೇ ಬಂದು
ಯಾರಾದರೂ ಮೈ ಮುಟ್ಟಿದರೂ
ಚಕ್ಕುಲಿಯಂತೆ ಮುರುಟಿ
ಸುಮ್ಮನಾಗಿಬಿಡುವೆ
ನನ್ನೊಳಸರಿದುಬಿಡುವೆ

ಇಲ್ಲವೆಂದಲ್ಲ ನನಗೂ
ತಲೆಯೆತ್ತಿ ನಿಲ್ಲುವ ಹಂಬಲ
ಎಲ್ಲರೂ ತಾವೇ ಶ್ರೇಷ್ಠರೆಂದು ಬೀಗುವಾಗ
ಮೈಕೆತ್ತಿ ಭಾಷಣ ಬಿಗಿವಾಗ
ತಳುಕು ಬಳುಕು ಮೈಗೇರಿಸಿಕೊಂಡು
ನಡೆವಾಗ ವಂದಿ ಮಾಗಧರೊಡನೆ
ಒತ್ತಿ ಬರುತ್ತದೆ ಬಯಕೆ ಬಾಲದ ತುದಿಯಿಂದ:
ಭುಸುಗುಡುತ್ತ ಹೆಡೆಯೆತ್ತಿ ನಿಂತುಬಿಡಲೇ
ಯಾರಿಗೇನು ಕಮ್ಮಿ ನಾನು
ಈ ಭೂಮಿಯ ಇತಿಹಾಸವನೆಲ್ಲ ಬಲ್ಲೆ
ನೂರು ಮೊಟ್ಟೆಗಳನೊಟ್ಟಿಗೇ ಇಡಬಲ್ಲೆ
ಹೊಗದೆಯೇ ಅರಿತಿರುವೆ ಎಲ್ಲರೊಡಲ ಟೊಳ್ಳ

ಪಥ ಬದಲಿಸಲು ಎಷ್ಟು ಹೊತ್ತು
ಕ್ರಾಂತಿಯ ಬೆಂಕಿಗೆ ಸಾಕು ಸಣ್ಣ ಕಿಚ್ಚು
ಹಾಗೆಂದೇ ಮಾಡಿಕೊಳ್ಳುವೆ
ನನಗೆ ನಾನೇ ಸಮಾಧಾನ:
ನಿರ್ಮಿತಿಯ ಮಿತಿಗೆ ಮಣಿದು
ಸುಮ್ಮನಿರುವುದೇ ಸುಮ್ಮಾನ
ತಟಸ್ಥ ನಿಲುವೇ ಗೆಲುವು ಕೆಲವಕ್ಕೆ
ಸುತ್ತಿದ ದೇಹವ ಬಿಚ್ಚಿ ನಡೆವೆ-
ನನಗೆಂದೇ ಇರುವ ದಾರಿಯಲ್ಲಿ
ಇದ್ದರೆ ತಡೆಗೋಡೆ ಮುಂದೆ
ವಾಪಸು ಬರುವೆ ತುಸುವೂ ಬೇಸರಿಸದೆ.


Monday, July 20, 2020

ಮಡಿಲು

ಮೊದಲಿನಿಂದಲೂ ನಿನಗೆ ಬಸ್ಸು ಎಂದರೆ ಆಯಿತು
ಒಳಗೆ ಕಾಲಿಟ್ಟವನೇ ಡ್ರೈವರ್ ಬಳಿಗೆ ಓಡಿ
ಸರಳುಗಳ ಬಗ್ಗಿ ದಾಟಿ ಗೇರ್‌ಬಾಕ್ಸ್‌ ಮೇಲೇರಿ ಕೂತುಬಿಡುತ್ತಿದ್ದೆ
ಇಳಿವ ಸ್ಥಳ ಬಂದರೂ ಇಳಿಯೆನೆಂದು ಹಟ ಮಾಡುತ್ತಿದ್ದೆ
ಹಾಯುವ ಬಸ್ಸುಗಳಿಗೆಲ್ಲ ಟಾಟಾ ಮಾಡುತ್ತಿದ್ದೆ
ಊಟದ ತಟ್ಟೆಯನ್ನೇ ಸ್ಟೀರಿಂಗಿನಂತೆ ತಿರುಗಿಸುತ್ತ
ಬುರ್ರನೆ ಓಡುತ್ತಿದ್ದೆ ಜಗುಲಿ ಅಂಗಳ ಹಿತ್ತಿಲು ರಸ್ತೆ

ಅದೊಂದು ಮುಂಜಾನೆ ಮೂಡುಗಾಳಿಯ ಸೆಳೆತಕ್ಕೆ ಸಿಕ್ಕು
ಹೊರಟುಬಿಟ್ಟೆ ಇನ್ನೂ ಮೀಸೆ ಮೂಡದ ಹುಡುಗ ಮನೆ ಬಿಟ್ಟು
ಹಿಡಿದ ಪೆನ್ನು-ಪುಸ್ತಕಗಳ ಜಗಲಿಯಲ್ಲೆ‌ ಬಿಸುಟು
ಎತ್ತ ಹೋದೆ ಎಂದು ಪತ್ತೆ ಹಚ್ಚಲು ವಾರ ಹಿಡಿಯಿತು
ತಿಳಿಯದ ಮಾರ್ಗದ ತಿಳಿಗಿಳಿ ಬಣ್ಣದ ಬಸ್ಸಿನ
ಮೆಟ್ಟಿಲಿನಲಿ ನಿಂತು ನೀನು ಹೊಸಹೊಸ ಊರುಗಳ
ಹೆಸರು ಕೂಗುತ್ತಿದ್ದೆ ಅಂತ ಯಾರೋ ಬಂದು ಹೇಳಿದರು
ಹುಡುಕುವುದ ಬಿಟ್ಟು ಕಾಯಲು ತೊಡಗಿದೆವು

ಆ ಮಾಗೀಚಳಿಯ ಗಢಗಢವ ಎಲ್ಲಿ ಕಂಬಳಿ ಹೊದ್ದು ಕಳೆದೆ
ಬೇಸಿಗೆಯಲಿ ಬಾಯಾರಿದಾಗ ಯಾವ ನಲ್ಲಿಗೆ ಕೈಯೊಡ್ಡಿದೆ
ಮಳೆಗಾಲಕೆ ಜತೆಯಾಗಲು ಛತ್ರಿಯಾದರೂ ಇದೆಯೋ
ಎಂಬ್ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲಿಲ್ಲ‌
ಬುಟ್ಟಿಯಲ್ಲಿ ಚೆಂಡುಹೂ ಹೊತ್ತು ದೊಡ್ಡಬ್ಬಕ್ಕೆಂದು ಬಂದ ನೀನು
ಕೈಗಂಟಿದ ಕರಿಯ ತೊಳೆಯಲು ಎಣ್ಣೆ ಹನಿಸಲು ಬಂದರೆ
ಇದು ಹೋಗದ ಬಣ್ಣ ಬಿಡಮ್ಮಾ ಅಂತ ಸೆಟಗೊಂಡುಬಿಟ್ಟೆ

ಆಮೇಲ್ಯಾರೋ ಅಂದರು: ದೂರದ ನಗರಕೆ ಸಾಗುವ
ರಾತ್ರಿಬಸ್ಸಿನಲ್ಲಿ ನಿನ್ನ ಪಾಳಿಯಂತೆ; ಅದು ನೀನೇ ಆಯ್ದ ದಾರಿಯಂತೆ
ತಪ್ಪಿಯೂ ಕಣ್ಣು ಮುಚ್ಚದೆ ಹೆದ್ದಾರಿಯ ಕತ್ತಲ ಸೀಳುವ
ಪ್ರಖರ ದೀಪಧಾರೆಯ ನಿರುಕಿಸುತ್ತ ನಿಂತಿರುತ್ತೀಯಂತೆ
ಹಗಲೂ ಮಲಗದೆ ವಾಹನದ ಕೊಳೆ ತೊಳೆಯುವೆಯಂತೆ
ಘಮಗುಡುವ ಅಗರಬತ್ತಿ ಹಚ್ಚಿ ಬೆಳಗುವೆಯಂತೆ
ವಾರಗೆಯ ಹುಡುಗರ ಜತೆ ಹಂಚಿಕೊಂಡು ಚಹ
ಜೋಕುಗಳಿಗೆ ನಕ್ಕು ಅವರಲ್ಲೊಬ್ಬನಾಗಿರುವೆಯಂತೆ
ನಗರಕ್ಕೆ ಹೊರಟ ಪಕ್ಕದೂರ ಶ್ಯಾಮಭಟ್ಟರನ್ನು 'ನಮ್ಮೂರೋರು'
ಅಂತ ಹೇಳಿ ಉಚಿತವಾಗಿ ಕರೆದುಕೊಂಡು ಹೋದೆಯಂತೆ
ಡ್ರೈವರಣ್ಣನ ಮನವೊಲಿಸಿ ಆಗೀಗ ನೀನೇ ಬಸ್ಸು ಓಡಿಸುವೆಯಂತೆ

ಈಗ್ಯಾಕೆ ಹೀಗೆ ಎಲ್ಲ ಕಳಕೊಂಡವನಂತೆ ಮಳೆ ನೋಡುತ್ತ ನಿಂತೆ
ನಿನ್ನ ಮಾಲೀಕರು ಬಸ್ಸು ನಿಲ್ಲಿಸಿಬಿಟ್ಟ ಸುದ್ದಿ ತಿಳಿಯಿತು
ಜಗವೇ ಹೆದರಿ ನಿಂತಿರುವಾಗ ನಿನ್ನ ಬಸ್ಸಿನದೇನು ಲೆಕ್ಕ
ಅಲ್ಲಿ ನೋಡು, ಆ ಕೆರೆಕೋಡಿಯ ಬಳಿಯಲಿ ನಿಲ್ಲು
ಹೆದ್ದಾರಿಯಲಿ ಸಾಗುವಾಗಿನ ಭರ್ರನೆ ಶಬ್ದ ಅಲ್ಲೂ ಕೇಳ್ವುದು
ಡಾಬಾದಲಿ ಸಿಗುವ ಖಡಕ್ಕು ಚಹಾ ನಾನೇ ಬತ್ತಿಸಿ ಕೊಡುವೆ
ಪಾರ್ಸೆಲ್ ಪೊಟ್ಟಣದ ಚಿತ್ರಾನ್ನವ ಇಲ್ಲೇ ಮಾಡಿ ಕೊಡುವೆ
ನಿನ್ನ ಹಳೆಯ ಗೆಳೆಯರೆಲ್ಲ ಈಗಿಲ್ಲಿ ಕ್ರಿಕೆಟ್ ಆಡುತ್ತಾರೆ,
ನೀನೂ ಅವರೊಂದಿಗೆ ಸೇರಿಕೋ
ಈ ಕಾಲವೂ ಕಳೆವುದು ಮಗನೇ ಬಲುಬೇಗ,
ಬೇಕಿದ್ದರೆ ಮತ್ತೆ ಮರಳುವೆಯಂತೆ ನಿನ್ನಾಸೆ ದಾರಿಗೆ- ಹೆದ್ದಾರಿಗೆ
ಇಕೋ, ರಾತ್ರಿಯಲಿ ನಿದ್ರೆ ಬರುವಂತೆ
ತಲೆಗೆ ಹರಳೆಣ್ಣೆ ಹಾಕಿ ತಟ್ಟುವೆ, ಹತ್ತಿರ ಬಾ.

Tuesday, May 26, 2020

ಕೊರೋನಾ ಕಾಲದ ಕನವರಿಕೆಗಳು

-ಬೆಕ್ಕು-

ಮಾಳಬೆಕ್ಕೊಂದು ಬಾಗಿಲು ತೆರೆದಿರುವ ಸಮಯ ನೋಡಿ
ಸದ್ದಿಲ್ಲದೆ ಒಳಬಂದು ಮನೆಯನ್ನೆಲ್ಲ ಸುತ್ತಾಡಿ
ಬಂದ ದಾರಿಯಿಂದಲೇ‌ ಹೊರಟುಹೋಯಿತು
ಅಡುಗೆಮನೆಯ ಕಟ್ಟೆಯ ಮೇಲೂ
ಊಟದಮನೆಯ ಮೇಜಿನ ಮೇಲೂ
ಚೂರೇ ತೆರೆದ ಕಪಾಟಿನೊಳಗೂ
ಏನೂ ಸಿಗಲಿಲ್ಲ ಅದಕ್ಕೆ

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಅಂತೇನು ಎಂದೂ ಅದನ್ನು ನಾನು ಆದರಿಸದಿದ್ದರೂ
ಸಾಧಾರಣ ದಿನಗಳಾಗಿದ್ದರೆ ಹಸಿದ ಮುಸುಡಿ ನೋಡಿ
ಒಂದು ಕುಡ್ತೆ ಹಾಲಾದರೂ ಕೊಡುತ್ತಿದ್ದೆ
ಒಮ್ಮೆ ಎತ್ತಿ ಆಡಿಸಿ ಬಿಡುತ್ತಿದ್ದೆ ಹೊರಗೆ

ಆದರೀಗ ಕೇಡುಗಾಲ, ಬೇಕೆಂದಾಗ ಬೀದಿಗಿಳಿವ ಹಾಗಿಲ್ಲ
ಇರುವ ಅರ್ಧ ಗಿಂಡಿ ಹಾಲನ್ನೇ ಕಾಪಾಡಿಕೊಳ್ಳಬೇಕು
ಮಧ್ಯಾಹ್ನದ ಚಹಾಕ್ಕೆ ಸಂಜೆಯ ಕಾಫಿಗೆ ರಾತ್ರಿ ಮಗಳಿಗೆ
ಉಳಿಸಬೇಕು ಬೊಗಸೆ ನಾಳೆಯ ಬೆಡ್‌ಕಾಫಿಗೆ

ಈ ಕಷ್ಟಕಾಲದಲ್ಲಿ ಇರುವುದನ್ನೇ
ಹಂಚಿ ಉಣ್ಣಬೇಕು ಎನ್ನುವರು
ಆದರೆ ಈ ಕಳ್ಳಬೆಕ್ಕನ್ನು ನಂಬುವುದು ಹೇಗೆ
ಯಾರ್ಯಾರ ಮನೆ ಹೊಕ್ಕು ಬಂದಿದೆಯೋ
ಎಂತೆಂಥ ಪ್ರದೇಶಗಳ ಪ್ರವೇಶಿಸಿ ಬಂದಿದೆಯೋ
ಎಂತೆಂಥವರು ಹಿಡಿದು ಮುದ್ದಿಸಿದ್ದಾರೋ
ಎಲ್ಲಿ ಸೋಂಕಿತರು ಎಲ್ಲಿ ಶಂಕಿತರು ಎಲ್ಲಿ ಗುಣಮುಖರು
ಎಲ್ಲರನ್ನೂ ಎಲ್ಲದನ್ನೂ ಶಂಕೆಯಿಂದಲೇ
ನೋಡುವಂತಾಗಿರುವ ಜೀವಭಯದ ಈ ದಿನಗಳಲ್ಲಿ

ಇಲ್ಲಾ, ಆ ಬೆಕ್ಕು ಒಳ್ಳೆಯದೇ ಇರಬಹುದು
ದುರುದ್ಧೇಶವೊಂದೂ ಇರಲಾರದು ಅದಕ್ಕೆ
ಸೊಕ್ಕೂ ಇಳಿದಿರಬಹುದು ಹಸಿವಿನ ಈ ಋತುವಿನಲ್ಲಿ
ಆದರೂ ಹಿಡಿ ಅನ್ನವಿಕ್ಕಲು ನಾನು ಮುಂದಾಗಲಿಲ್ಲ ಯಾಕೆ
ಮನೆ ಮಗಳು ಮಡದಿ ಮುಂದಿನ ದಿನಗಳು
ಭೀಕರ ದೃಶ್ಯಗಳೆಲ್ಲ ಕಣ್ಮುಂದೆ ಬಂದು
ಕೈ ನಡುಗಿ ಮನಸು ಹಿಂಜರಿದು ಹೆಜ್ಜೆ ಮುಂದಿಡದೆ

* * *

-ಪಾಪಪ್ರಜ್ಞೆ-

ಹಸಿದು ಬಂದ ಬೆಕ್ಕು ಹಸಿದುಕೊಂಡೇ ಹೊರಗೋಡಿತು
ಹಾಗೆ ಮನೆಬಾಗಿಲಿಗೆ ಬಂದವರಿಗೆ ಇಲ್ಲಾ
ಎನ್ನುವುದು ನಮ್ಮ ಸಂಸ್ಕೃತಿಯಲ್ಲ
ಅಯ್ಯೋ ಸಂಸ್ಕೃತಿ ಗಿಂಸ್ಕೃತಿಗಳ ಮಾತು ಬಿಡಿ ಸ್ವಾಮಿ
ಬದುಕಿಕೊಂಡರೆ ಸಾಕಾಗಿದೆ
ರಸ್ತೆ ತುಂಬಾ ಜನ
ಮುಕ್ತ ಸಂಚಾರ
ಮೈಮೇಲೇ ಎರಗುವ ಮಂದಿ
ಎಲ್ಲರಿಗೂ ಏನೇನೋ ಕಾರ್ಯಕಾರಣ
ಇವರ್ಯಾರನ್ನೂ ಎಂದೂ ತಡೆದಿರಲಿಲ್ಲ ನಾವು
ಈಗ ಏನಿದು ಪಿರಿಪಿರಿ
ನನ್ನ ಪ್ರಕಾರ ಅವರದು ತಪ್ಪು
ಅವರ ಪ್ರಕಾರ ನನ್ನದು ತಪ್ಪು

ಅರೆ, ಆ ಬೆಕ್ಕು ಎಲ್ಲಿ ಹೋಯಿತು
ಬಾಗಿಲಿನಿಂದ ಹೊರಗೋಡಿದ್ದು
ಸಣ್ಣ ಕಿಟಕಿಯಿಂದ ನುಸುಳಿ
ಹಾಗೇ ಕಟಾಂಜನ ಹತ್ತಿ
ಮೆ
ಟ್ಟಿ
ಲಿ
ಳಿ
ದು
ಪ್ಯಾರಾಪಿಟ್ಟಿನ ಪುಟ್ಟ ಕಟ್ಟೆಯಮೇಲೆ
ಹೆ ಜ್ಜೆ ಯ ಮೇ ಲೊಂ ದ್ಹೆ ಜ್ಜೆ ಯ ನಿ ಕ್ಕು ತ
ಮತ್ತೊಂದು ಮನೆಗೆ ಹೋಯಿತೇ
ಅಲ್ಲದಕ್ಕೆ ಆಹಾರ ಸಿಕ್ಕಿತೇ
ಮತ್ತೆ ರಸ್ತೆಗಿಳಿಯಿತೇ
ಈ ಜನಜಂಗುಳಿಯಲ್ಲಿ
ಸಾವಿರ ಕಾಲುಗಳ ನಡುವೆ ಜಾಗ ಮಾಡಿಕೊಂಡು
ನುಸುಳಿ ನುಸುಳಿ ನುಸುಳಿ
ಒಂದು ಮಾಳಬೆಕ್ಕು

ಈಗ ಮತ್ಯಾರದೋ ಮನೆಯೊಳಗೋ
ಅಥವಾ ತಿರುಗಿ ನನ್ನದೇ ಮನೆಯೊಳಗೋ
ಅಥವಾ ನನ್ನ ಮನದೊಳಗೋ

ಟೀವಿಯಲ್ಲಿ ದೃಶ್ಯಗಳು
ಉದ್ದುದ್ದ ಕ್ಯೂ ನಿಂತ ಮಂದಿ
ಅರ್ಧ ಲೀಟರು ಉಚಿತ ಹಾಲಿಗೆ
ಜನಧನ ಖಾತೆಯ ಐನೂರು ರೂಪಾಯಿಗೆ
ತವರಿಗೆ ತೆರಳುವ ಕನಸಿಗೆ

* * *

-ಚಾರಣ-

ಅನಿವಾರ್ಯವಿರಲಿಲ್ಲ
ಅವಶ್ಯಕತೆಯಂತೂ ಅಲ್ಲವೇ ಅಲ್ಲ
ಆದರೂ ನಡೆಯುತ್ತಿದ್ದೆವು ಭಾರಬ್ಯಾಗು ಬೆನ್ನಿಗೇರಿಸಿ

ದಣಿಯಲೆಂದೇ ನಡೆದದ್ದು
ಮಣಿಯಲೆಂದೇ ಬೆಟ್ಟವೇರಿದ್ದು
ಡೆಕತ್ಲಾನಿನಲ್ಲಿ ಕೊಂಡ ಶೂ
ಅಮೆಜಾನಿನಿಂದ ತರಿಸಿದ ಹೈಕಿಂಗ್ ಬ್ಯಾಗ್
ಉಪ್ಪು ಸೇರಿಸಿ ಹುರಿದ ಗೋಡಂಬಿ
ಚಪ್ಪರಿಸಲು ಮತ್ತಷ್ಟು ಕುರುಕಲು ತಿಂಡಿ
ಸುಸ್ತು ಮರೆಸಲು ಜೋಕು ದಂಡಿದಂಡಿ

ಆದರೆ ಒಂದು ಕೊರಗು ಉಳಿದೇ ಹೋಗಿತ್ತು
ಎಡಕುಮರಿಯ ಸುರಂಗಮಾರ್ಗದಲಿ ಹಾಯುವ
ಆ ಹಳಿಗಳ ಮೇಲೊಮ್ಮೆ ನಡೆಯಬೇಕೆಂಬುದು..
ಹಾಗೆಯೇ ದೂಧ್‌ಸಾಗರ್ ಜಲಪಾತವನ್ನು
ಹಳಿಗಳ ಮೇಲೆ ನಡೆದುಹೋಗಿಯೇ ನೋಡಬೇಕೆಂದು

ಇವತ್ತು ಪೇಪರಿನಲ್ಲಿ ಹೆಣಗಳು
ಹಳಿಗಳ ಮೇಲೆ ಮಲಗಿಯೇ ಜೀವ ಬಿಟ್ಟವರು
ಪಕ್ಕದಲ್ಲೊಂದಷ್ಟು ಒಣ ರೊಟ್ಟಿಚೂರು

ಅಲ್ಲಾ ಆ ಬೆಕ್ಕು ಬಯಸಿದ್ದಾದರೂ ಏನನ್ನ
ಒಂದು ಹಿಡಿ ಹಾಲು-ಅನ್ನ
ಇಷ್ಟಕ್ಕೂ ಅದು ಆ ಬೆಕ್ಕಿನ ಹಕ್ಕು:
ಅಷ್ಟೆಲ್ಲ ದಿನ ನನ್ನ ಮಗಳನ್ನು ಆಡಿಸಿದ್ದಕ್ಕೆ
ಮೃದುಮೈಯ ಬೆಚ್ಚನೆ ಸ್ಪರ್ಶ ಕೈಗೊದಗಿಸಿದ್ದಕ್ಕೆ
ಉಗುರಿನಿಂದೊಮ್ಮೆಯೂ ಪರಚದೆ ಬಿಟ್ಟಿದ್ದಕ್ಕೆ

ಏ ಸಾಕು ಬಿಡಿ ಗುರುಗಳೇ
ಅಷ್ಟೆಲ್ಲ ತಲೆಬಿಸಿ ಮಾಡ್ಕೊಂಡ್ರೆ ಹ್ಯಾಗೆ
ಉಂಡಾಡಿ ಜೀವ, ನಮ್ಮನೇಲಿಲ್ದಿದ್ರೆ ಮತ್ತೊಂದ್ಮನೆ
ಹಿಂಗೇ ಮುಂದುವರೆದ್ರೆ ನಮ್ ಲೈಫೂ ಕಷ್ಟಾನೇ ಇದೆ
ನಾವು ಯಾರ ಮನೆ ಬಾಗಿಲಿಗೆ ಹೋಗೋಣ
ತಳುಕು ಹಾಕ್ಬೇಡಿ ಹಾಗೆಲ್ಲ ಯಾವುದನ್ನು ಯಾವುದಕ್ಕೋ

* * *

-ಪ್ರಾರ್ಥನೆ-

ಇಂದಿನಿಂದ ದೇವಾಲಯಗಳಲ್ಲಿ ಆನ್‌ಲೈನ್ ದರ್ಶನ
ಅವರವರ ಮನೆಯಿಂದಲೆ ನೈವೇದ್ಯ
ಯುಪಿಐ ಮೂಲಕ ಕಾಣಿಕೆ
ಕೊರಿಯರಿನಲ್ಲಿ ಪ್ರಸಾದ

ಮೃಗಖಗಾದಿಗಳಿಗೆಲ್ಲ ಅಲ್ಲಲ್ಲೆ ಆಹಾರವಿತ್ತ
ಕಾಗಿನೆಲೆಯಾದಿಕೇಶವರಾಯನೇ,
ಇದನೆಲ್ಲ ಬೇಗ ಮುಗಿಸು
ಆ ಬೆಕ್ಕು ಹಸಿವಿನಿಂದ ಕಂಗೆಡದಿರಲಿ
ಕಳುಹಿಸಿಕೊಡು ಶ್ರಮಿಕ ಎಕ್ಸ್‌ಪ್ರೆಸ್ಸಿನಲ್ಲಿ ಹೇಗಾದರೂ
ಕೊನೆಗೊಳಿಸು ಈ ಶಂಕಾಪ್ರವೃತ್ತಿಯ ನನ್ನಿಂದ
ಹಾರ್ದಿಕ ನಗುವ ಮರಳಿಸು ಎದೆಯೊಳಗೆ
ಹಂಚಿ ತಿನಲುಗೊಡು ಸಹಪಂಕ್ತಿಯಲಿ ಕೂತು ಇದ್ದದ್ದ.

Wednesday, April 22, 2020

ಬೇರೆ ವಿಶೇಷಗಳೇ ಇಲ್ಲದ ದಿನಗಳಲ್ಲಿ..


ಪ್ರಿಯ ದೋಸ್ತಾ,

ನಾನೂ-ನೀನೂ ಒಟ್ಟಿಗೇ ಈ ನಗರಕ್ಕೆ ಬಂದಿದ್ದು.  ಅರೆಬರೆ ಓದಿಕೊಂಡು, ಹಸಿಬಿಸಿ ಮೆತ್ತಿಕೊಂಡು, ಹುಸಿಧೈರ್ಯ ತುಂಬಿಕೊಂಡು ಮುಖ್ಯ ನಿಲ್ದಾಣದಲ್ಲಿ ಬಸ್ಸಿನಿಂದಿಳಿದಿದ್ದು ಬಗಲ ಚೀಲಗಳ ಸಮೇತ. ಆಗಷ್ಟೆ ತೆರೆದುಕೊಳ್ಳುತ್ತಿದ್ದ ಮುಂಜಾನೆ. ಸೂರ್ಯಕಿರಣಗಳು ನಿಲ್ದಾಣದ ಮೇಲ್ಚಾವಣಿಯ ಚುಂಬಿಸುತ್ತಿದ್ದವು. ಸಿಟಿಬಸ್ಸುಗಳು ದಿನದ ಮೊದಲ ಸುತ್ತಿಗೆ ಹೊರಡಲು ಅಣಿಯಾಗಿದ್ದವು. ಮೂಲೆಯಂಗಡಿಯ ಚಹಾದ ಬೋಗುಣಿಯಿಂದೆದ್ದ ಹಬೆ ಅದರ ಸೊಗಡನ್ನು ಎಲ್ಲೆಡೆ ಹರಡುತ್ತಿತ್ತು. ಹುರುಪಿನಲ್ಲಿದ್ದ ಕಂಡಕ್ಟರು-ಡ್ರೈವರುಗಳು ಅದಾಗಲೇ ಶುರುವಾಗಿದ್ದ ಗಿಜಿಗಿಜಿಯ ಚದುರಿಸುವಂತೆ ತಮ್ಮ ಬಸ್ಸುಗಳ ಹಾದಿಯನ್ನು ಉಚ್ಛಕಂಠದಲ್ಲಿ ಉಚ್ಛರಿಸುತ್ತಾ ಆಹ್ವಾನಿಸುತ್ತಿದ್ದರು.

ಹಾಗೆ ನಾವು ಬಂದಿಳಿದಾಗ ನಮಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಮಹಾನಗರ ಎಂದರೇನು, ಸಿಗ್ನಲ್ಲಿನಲ್ಲಿ ರಸ್ತೆ ದಾಟುವುದು ಎಂದರೇನು, ಸಿಟಿಬಸ್ಸುಗಳಲ್ಲಿ ಸಂಚರಿಸುವುದು ಹೇಗೆ, ನಾವಿಳಿಯಬೇಕಾದ ನಿಲ್ದಾಣವ ಪತ್ತೆ ಹಚ್ಚುವುದು ಹೇಗೆ, ಎಲ್ಲಿ ಉಳಕೊಳ್ಳುವುದು, ಕೆಲಸ ಹುಡುಕುವುದು ಹೇಗೆ, ಇಂಟರ್ವ್ಯೂಗಳನ್ನು ಎದುರಿಸುವುದು ಹೇಗೆ, ಸಂಬಳಕ್ಕಾಗಿ ದುಡಿಯುವುದು ಎಂದರೇನು, ಯಾರದೋ ಆದೇಶಗಳನ್ನು ಪಾಲಿಸುತ್ತ ಒಂದು ಸಂಸ್ಥೆಗೆ ನಿಷ್ಠನಾಗಿ ಕೆಲಸ ಮಾಡುವ ಪರಿಯೇನು, ದುಡಿದ ಹಣವನ್ನು ಇಷ್ಟಿಷ್ಟೇ ಖರ್ಚು ಮಾಡುತ್ತಾ ತಿಂಗಳಿಡೀ ಸಂಬಾಳಿಸುವುದು ಹೇಗೆ... ಏನೂ ಗೊತ್ತಿಲ್ಲದೆ ಈ ನಗರಿಗೆ ಬಂದುಬಿಟ್ಟಿದ್ದೆವು. ಅವರಿವರು ಕೊಟ್ಟ ಅಷ್ಟಿಷ್ಟು ಸಲಹೆಗಳು, ಎಲ್ಲೋ ಕೇಳಿದ ಆಣಿಮುತ್ತುಗಳು, ಮತ್ತೆಲ್ಲೋ ಓದಿಕೊಂಡ ಪಾಠಗಳು, ಅಸ್ಪಷ್ಟ ಇಂಗ್ಲೀಷು, ಅರ್ಧಮರ್ಧ ಕಂಪ್ಯೂಟರ್ ನಾಲೆಜ್ಜುಗಳನ್ನು ಎದೆಗವಚಿಕೊಂಡು ಇಲ್ಲಿಗೆ ಪದಾರ್ಪಣೆ ಮಾಡಿದ್ದೆವು.

ಆಮೇಲೆ ಇಲ್ಲಿ ತಿಂಗಳಾನುಗಟ್ಟಲೆ ಅಲೆದಾಡಿ ಕೆಲಸ ಗಿಟ್ಟಿಸಿಕೊಂಡದ್ದು, ನೆಂಟರಿಷ್ಟರ ಮನೆಯಲ್ಲಿ ಉಳಕೊಂಡಿದ್ದು, ನೀನೆಲ್ಲೋ ನಾನೆಲ್ಲೋ ಆದದ್ದು, ಬೆಳಬೆಳಗ್ಗೆ ತರಾತುರಿಯಲ್ಲಿ ಬಸ್ಸು ಹಿಡಿಯಲು ಓಡಿದ್ದು, ಕೆಲಸ ಸರಿಯಾಗಿ ಮಾಡಲು ತಿಳಿಯದೆ ಬೈಸಿಕೊಂಡಿದ್ದು, ಮೊದಲ ಸಂಬಳ ಬಂದಾಗ ಬೀಗಿದ್ದು, ಬಂದ ಸಂಬಳ ಎರಡೇ ವಾರದಲ್ಲಿ ಖಾಲಿಯಾದಾಗ ತತ್ತರಗುಟ್ಟಿದ್ದು, ಮತ್ತೊಬ್ಬರ ನೋಡುತ್ತಲೇ ತಿಳಿಯದ್ದ ಕಲಿತದ್ದು, ಕ್ಲಾಸು-ಕರೆಸ್ಪಾಂಡೆನ್ಸು ಅಂತ ಮತ್ತೇನೇನೋ ಕೋರ್ಸುಗಳ ಮಾಡಿಕೊಂಡಿದ್ದು, ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹಾರಿದ್ದು, ನಿಧಾನಕ್ಕೆ ಬದುಕು ಕಟ್ಟಿಕೊಳ್ಳುತ್ತ ಹೋಗಿದ್ದು...

ಈ ನಗರ ನಮಗೆ ಎಷ್ಟೆಲ್ಲ ಕಲಿಸಿತು. ಪ್ರತಿದಿನವೂ ಹೊಸತನ್ನು ಹೇಳಿಕೊಟ್ಟಿತು. ನಮ್ಮ ಮುಗ್ಧತೆಯ ಕಳೆಯುತ್ತ ಹೋಯಿತು. ಬಿದ್ದೆವು, ಎದ್ದೆವು, ಬೆಳೆಯುತ್ತ ಹೋದೆವು.  ಗಳಿಕೆ, ಉಳಿಕೆ, ವಸ್ತುಗಳು, ವಾಹನಗಳು, ಮದುವೆ, ಮನೆ, ಮಡದಿ, ಮಕ್ಕಳು... ಎಲ್ಲವನ್ನು ಹೊಂದಿದೆವು ಇದೇ ನಗರದಲ್ಲಿ. ಈ ನಗರ ಎಂದಿಗೂ ನಮ್ಮನ್ನು ಉಪೇಕ್ಷಿಸಲಿಲ್ಲ.  

ಈ ನಗರಕ್ಕೆ ನಾವೇನು ಮೊದಲಿಗರಲ್ಲ. ಇದು ಎಲ್ಲರನ್ನೂ ಹೆಚ್ಚುಕಮ್ಮಿ ಹೀಗೆಯೇ ಬೆಳೆಸಿದೆ. ಹೆದರಿ ಹಿಮ್ಮೆಟ್ಟಿ ಹೋದವರು ಇಲ್ಲದಿಲ್ಲ. ಆದರೆ ಇದು ಎಂಥವರಿಗೂ ಧೈರ್ಯ ಹೇಳದೇ ಉಳಿದಿಲ್ಲ. ಹುಮ್ಮಸ್ಸು ತುಂಬುವುದರಲ್ಲಿ ಲೋಪ ಮಾಡಿಲ್ಲ. ಆರ್ತರಾದವರಿಗೆ ಭರವಸೆಯ ಕೈಚಾಚುವುದರಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಗಗನಚುಂಬಿ ಕಟ್ಟಡಗಳಲ್ಲಿ, ಥಳಥಳ ಹೊಳೆವ ಹೊದಿಕೆಯ ಭವನಗಳಲ್ಲಿ, ಇರುವೆ ಸಾಲಿನಂಥ ಟ್ರಾಫಿಕ್ಕಿನಲ್ಲಿ, ಗಿಜಿಗುಟ್ಟುವ ಸಂದಣಿಯಲ್ಲಿ ಉತ್ಸಾಹದ ಬೆಳಕನ್ನೇ ಪ್ರತಿಫಲಿಸಿದೆ. ಉಳ್ಳವರಿಗೆ ಪಂಚತಾರಾ ಹೋಟೆಲುಗಳಲ್ಲೂ, ಭರಿಸಲಾಗದವರಿಗೆ ದರ್ಶಿನಿಗಳಲ್ಲೂ, ಅದೂ ಇಲ್ಲದವರಿಗೆ ಬೀದಿಬದಿಯಲ್ಲೂ ಊಟ ಹಾಕಿದೆ. ವಿಲ್ಲಾಗಳಲ್ಲೋ, ಅಪಾರ್ಟ್‌ಮೆಂಟುಗಳಲ್ಲೋ, ಮಹಡಿಮನೆಗಳಲ್ಲೋ, ಒಂಟಿರೂಮುಗಳಲ್ಲೋ, ಜೋಪಡಿಗಳಲ್ಲೋ, ಫ್ಲೈಓವರ್ ಕೆಳಗಿನ ಅಖಂಡ ನೆಲದಲ್ಲೋ ಮಲಗಿಸಿ ಜೋಗುಳ ಹಾಡಿದೆ. ಛಲ ಬಿಡದವರೆಲ್ಲ ಇಲ್ಲಿ ಹೇಗೋ ಬಚಾವಾಗಿದ್ದಾರೆ.

ಆದರೆ ಇದೇನಾಗಿ ಹೋಯಿತು ಈಗ? ಗ್ರಹಣ ಬಡಿದಂತೆ ಮ್ಲಾನಗೊಂಡಿದೆ ನಗರ. ಕಣ್ಣಿಗೇ ಕಾಣದ ವೈರಾಣುವೊಂದು ಇಡೀ ನಗರದ ಉತ್ಸಾಹವನ್ನು ಆಪೋಶನ ತೆಗೆದುಕೊಂಡಿದೆ. ರಸ್ತೆಗಳು ಖಾಲಿ. ನಿಲ್ದಾಣಗಳು ಖಾಲಿ. ಪಾದಚಾರಿ ಮಾರ್ಗಗಳು ಖಾಲಿ. ಎಂದೂ ತುಂಬಿರುತ್ತಿದ್ದ ಮಾಲುಗಳು, ಥಿಯೇಟರುಗಳು, ಹೋಟೆಲುಗಳು, ಅಂಗಡಿಗಳು ಈಗ ಬಣಬಣ. ಉಪವನದ ಗೇಟು ಹಾಕಲಾಗಿದೆ. ಬಹುಮಹಡಿಯ ವಾಣಿಜ್ಯ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ವೈನ್‌ಸ್ಟೋರಿನ ಶಟರ್ ಎಳೆಯಲಾಗಿದೆ. ಒಳಗಿರುವವರನ್ನೂ ತೋರುತ್ತಿದ್ದ ಕಾಫಿಡೇಗಳ ಗಾಜುಮುಖ ಬಾಡಿದೆ. ಹೊರಗಿರುವವರಿಗೂ ಮನರಂಜನೆಯೊದಗಿಸುತ್ತಿದ್ದ ಎಲೆಕ್ಟ್ರಿಕ್ ಶೋರೂಮುಗಳ ದೊಡ್ಡ ಪರದೆಯ ಟೀವಿಗಳು ಆಫಾಗಿವೆ. ಕೆಳಗಿರುವವರನ್ನು ಮೇಲಕ್ಕೊಯ್ಯುತ್ತಿದ್ದ ಬಜಾರಿನ ಲಿಫ್ಟುಗಳಿಗೆ ಜಂಗು ಹಿಡಿಯುತ್ತಿದೆ. ಸಾಲುದೀಪಗಳ ಮೆರವಣಿಗೆಯಂತೆ ಸಾಗುತ್ತಿದ್ದ ಮೆಟ್ರೋದ ಸುಳಿವಿಲ್ಲ. ಫುಟ್‌ಬೋರ್ಡಿನಲ್ಲಿ ಪಯಣಿಗರ ನೇತಾಡಿಸುತ್ತ ಓಡುತ್ತಿದ್ದ ದೊಡ್ಡ ಬಸ್ಸುಗಳ ಸದ್ದಿಲ್ಲ. ಟಕ್ಕನೆ ತಿರುವಿ ಟಕ್ಕನೆ ನಿಲ್ಲುತ್ತಿದ್ದ ಆಟೋಗಳು ಕಾಣುತ್ತಿಲ್ಲ. ಸ್ಕೈವಾಕುಗಳು, ಅಂಡರ್‌ಪಾಸುಗಳು, ಫ್ಲೈಓವರುಗಳು, ಗ್ರೇಡ್ ಸೆಪರೇಟರುಗಳು, ಜಂಕ್ಷನ್ನುಗಳಲ್ಲಿ ಜನರ ಹಾಜರಾತಿಯೇ ಇಲ್ಲ. ಸಿಗ್ನಲ್ಲಿನ ದೀಪಗಳಿಗೆ ಬಣ್ಣಗುರುಡಾಗಿದೆ.

ಇದು ನಾವು ನೋಡಿದ ನಗರ ಅಲ್ಲವೇ ಅಲ್ಲ. ಹೀಗೆ ವಾರಗಟ್ಟಲೆ-ತಿಂಗಳುಗಟ್ಟಲೆ ಈ ನಗರ ಸ್ಥಬ್ದವಾಗಿದ್ದು ಇಲ್ಲವೇ ಇಲ್ಲ. ಎಂತಹ ಪ್ರಖರ ಬಂದ್ ಆದರೂ, ಯಾವ ಜನನಾಯಕ ಸತ್ತರೂ, ಎಷ್ಟೇ ಬಿಗಿಯ ಕರ್ಫ್ಯೂ ಹಾಕಿದ್ದರೂ ಸಂಜೆಯ ಹೊತ್ತಿಗೆ ನಗರ ದೀಪಗಳನ್ನು ಬೆಳಗುತ್ತಾ ಮತ್ತೆ ಗರಿಗೆದರಿ ನಿಲ್ಲುತ್ತಿತ್ತು. ಪಾನಿಪುರಿ ಅಂಗಡಿಗಳಿಂದ ಪರಿಮಳ ಹೊಮ್ಮುತ್ತಿತ್ತು. ಐಸ್‌ಕ್ರೀಮ್ ಪಾರ್ಲರು ಅರಸಿ ಜೋಡಿಗಳು ನಡೆಯುತ್ತಿದ್ದವು. ಸೇಬುವಿನಂತಹ ಬಲೂನನ್ನು ಬಲಗೈಯಲ್ಲಿ ಚಿಮ್ಮಿಸುತ್ತ ಮಕ್ಕಳು ಬೀದಿಯಲ್ಲಾಡುತ್ತಿದ್ದವು.

ಕನಸಿನಲ್ಲೂ ಊಹಿಸಲಾಗದ ರೀತಿಯಲ್ಲಿ ಭೀತಿಯ ಪೊರೆಯೊಂದು ನಗರವನ್ನು ಆವರಿಸಿಬಿಟ್ಟಿದೆ. ನಮ್ಮನ್ಯಾರು ತಡೆಯಬಲ್ಲರು ಎಂಬ ದರ್ಪದಲ್ಲಿ ಓಡುತ್ತಿದ್ದ ಮನುಷ್ಯನಿಗೆ ತಡೆಯಾಗಿದೆ. ಧಾವಂತವೇ ದಿನಚರಿಯಾಗಿದ್ದವರ ಮುಂದೆ ಗೋಡೆಯೊಂದು ಎದ್ದುನಿಂತಿದೆ.  ವೇಗದೂತರನ್ನೆಲ್ಲ ಒಂದೇ ಹುರಿಯಿಂದ ಕಟ್ಟಿಹಾಕಲಾಗಿದೆ. ಹಣ, ಹುದ್ದೆ, ಹೆಸರು, ಮೇಲುಗೈಗಳ ಹಂಬಲವ ಹೇರಿಕೊಂಡು ನಮ್ಮನ್ನೇ ವಾಹನವೆಂದುಕೊಂಡು ನುಗ್ಗುತ್ತಿದ್ದವರೆಲ್ಲ ನಡುದಾರಿಯಲ್ಲಿ ನಿಂತುಬಿಟ್ಟಿದ್ದೇವೆ ಹಠಾತ್: ಒಂದು ಬೃಹತ್ ಟ್ರಾಫಿಕ್ ಜಾಮಿನಲ್ಲಿ ಸಿಲುಕಿದವರಂತೆ. ಇಲ್ಲಿಂದ ಮುಂದೆ ನೋಡಿದರೆ ತುದಿಯೇ ಕಾಣುತ್ತಿಲ್ಲ. ಜತೆಗೆ ನಮ್ಮ ಹಾಗೆಯೇ ನಿಂತಿರುವ ಇಡೀ ವಿಶ್ವಸಮೂಹ. ಕೆಲವರು ನಮಗಿಂತ ಮುಂದಿರುವಂತೆಯೂ ಹಲವರು ನಮಗಿಂತ ಹಿಂದಿರುವಂತೆಯೂ ಕಾಣುವರು.  ಆದರೆ ಈ ಸರತಿಸಾಲು ಮುಂದುವರೆಯುವಂತೆಯೇ ಕಾಣುತ್ತಿಲ್ಲ.  ಈ ಜಾಮ್ ಕ್ಲಿಯರ್ ಮಾಡಿ ಕೊಡಲು ಯಾವ ಪೊಲೀಸೂ ಬರುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.

ಹಾಗಾದರೆ ಮುಂದೇನು ಕಥೆ?  ಇವೆಲ್ಲ ಎಷ್ಟು ದಿನ? ಹೀಗೆ ಇನ್ನೆಷ್ಟು ಕಾಲ ನಿಂತಿರಲು ಸಾಧ್ಯ? ಈ ದುಸ್ಥಿತಿಗೆ ಕಂಗೆಟ್ಟು, ಊರು ಸೇರಿಕೊಳ್ಳುವ ಸಲುವಾಗಿ, ನೂರಾರು ಮೈಲಿ ನಡೆದು ಸಾಗಿರುವ ದಿನಗೂಲಿ ಕಾರ್ಮಿಕರ ದೃಶ್ಯ ನಮ್ಮ ಕಣ್ಣ ಮುಂದಿದೆ. ದುಡಿಮೆಯಿಲ್ಲದೆ ಹೈರಾಣಾಗಿರುವ ಅದೆಷ್ಟೋ ಕುಟುಂಬಗಳ ಕಥೆ ದಿನದಿನವೂ ಕೇಳಿಬರುತ್ತಿದೆ. ಅವರೆಲ್ಲ ಎಷ್ಟು ದಿನ ತಡೆದಾರು? ನಮ್ಮೆಲ್ಲರನ್ನು ಸಾಕಿ ಸಲಹುತ್ತಿದ್ದ ಈ ನಗರ ನಿಸ್ಸಹಾಕವಾಗಿ ನೋಡುತ್ತಿದೆ. ಇದರ ತಾಯಿಗುಣ ಮುಗಿಯಿತೆ? ನಾವೆಲ್ಲ ನಮ್ಮ ನಮ್ಮ ಊರುಗಳಿಗೆ ಮರಳುವ ಸಮಯ ಬಂದಿತೆ? ಸರಿ, ನಮಗಾದರೆ ವಾಪಸು ಹೋಗಲು ಊರು ಎಂಬುದೊಂದಿದೆ. ಅಂಥದ್ದೊಂದು ಆಯ್ಕೆ ಇಲ್ಲದಿರುವ, ಇಲ್ಲೇ ಹುಟ್ಟಿ ಬೆಳೆದವರ, ಬೇರೂ ಇಲ್ಲದೇ ಇಲ್ಲಿ ಗಟ್ಟಿ ತಳವೂರಲೂ ಆಗಿರದ ಅಬ್ಬೇಪಾರಿಗಳ ಗತಿಯೇನು? ಅವರೆಲ್ಲಿಗೆ ಹೋಗಬೇಕು?

ಊರಿನಿಂದ ಫೋನ್ ಮಾಡಿದಾಗೆಲ್ಲ ಅಮ್ಮ ಕೇಳುತ್ತಾಳೆ: ಮತ್ತೇನು ವಿಶೇಷ?”  ಏನು ಹೇಳಲಿ? ಎಲ್ಲೆಡೆ ಒಂದೇ ಸುದ್ದಿ ಈಗ.  ಬೇರೆ ವಿಶೇಷಗಳೇ ಇಲ್ಲದ ದಿನಗಳು ಇವು... ಟೀವಿ ಹಚ್ಚಿದರೆ ಅದೇ ಸುದ್ದಿ, ಫೋನೆತ್ತಿದರೆ ಅದೇ ಸುದ್ದಿ, ಇಂಟರ್ನೆಟ್ ತೆರೆದರೆ ಅದೇ ಸುದ್ದಿ. ಹೆಚ್ಚು ಹಬ್ಬಿಸುತ್ತಿರುವವರು ಅವರೇ.. ಸರ್ಕಾರದ ಆದೇಶಗಳನ್ನೂ ಪಾಲಿಸುತ್ತಿಲ್ಲ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ತಿಲ್ಲ ಯಾಕೆ?”; ಇಪ್ಪತ್ತು ಪರ್ಸೆಂಟ್ ಜನ ಮಾಡ್ತಿರೋ ತಪ್ಪಿಗೆ ಮನೆಯೊಳಗೆ ಕೂತಿರೋ ನಾವು ಎಂಬತ್ತು ಪರ್ಸೆಂಟ್ ಜನ ಯಾಕೆ ಅನುಭವಿಸಬೇಕು?”; ಚೀನಾವೇ ಸೃಷ್ಟಿಸಿದ ವೈರಸ್ ಇದು.. ಇನ್ನು ಮುಂದೆ ಚೀನಾ ತಯಾರಿಸಿದ ವಸ್ತುಗಳನ್ನು ಖರೀದಿಸಬಾರದು”; ತನ್ನ ದೇಶಕ್ಕೆ ಇಷ್ಟೊಂದು ನಷ್ಟ ಉಂಟುಮಾಡಿರೋದಕ್ಕೆ ದೊಡ್ಡಣ್ಣನಿಗೆ ಭಯಂಕರ ಸಿಟ್ಟು ಬಂದಿದೆಯಂತೆ. ಈ ವೈರಸ್ ನಿರ್ಮೂಲವಾಗುತ್ತಿದ್ದಂತೆ ವಿಶ್ವರಾಷ್ಟ್ರಗಳನ್ನೆಲ್ಲ ಒಗ್ಗೂಡಿಸಿ ಚೀನಾ ಮೇಲೆ ಯುದ್ಧ ಮಾಡ್ತಾರಂತೆ”; ಎಕಾನಮಿ ಹತ್ತಿಪ್ಪತ್ತು ವರ್ಷ ಹಿಂದೆ ಹೋಗಿ ಎಷ್ಟೋ ಜನ ಕೆಲಸ ಕಳ್ಕೊಳ್ತಾರಂತೆ.. ಉದ್ಯಮಿಗಳು ಮಣ್ಣು ಮುಕ್ತಾರಂತೆ”; ಇದಕ್ಕೆ ಔಷಧಿ ಬರಲಿಕ್ಕೆ ಇನ್ನೂ ಎರಡು ವರ್ಷ ಬೇಕಂತೆ”;  ನಗರಗಳಲ್ಲಿ ದುಡ್ಡು ಮಾಡೋ ಕಥೆ ಮುಗೀತು. ಇನ್ನೇನಿದ್ರೂ ಹಳ್ಳಿಯ ಬದುಕು, ಕೃಷಿಗೆ ಬೆಲೆ ತರಹೇವಾರಿ ಮಾತುಗಳು, ವಾದಗಳು, ಚರ್ಚೆಗಳು.  ಎಲ್ಲವೂ ಯೋಚನೆಗೆ ಹಚ್ಚುವಂತವೇ. ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುವಂತವೇ.

ದುಡಿಮೆಯಿದ್ದರೆ ನಗರ. ಹಣವಿದ್ದರೆ ನಗರ. ಇಲ್ಲಿ ಕಾಯಕವೇ ಕೈಲಾಸ. ಅದಿಲ್ಲದಿದ್ದರೆ ಇಲ್ಲಿ ಬದುಕುಳಿಯುವುದು ಕಷ್ಟಸಾಧ್ಯ. ಧನಿಕನಿಗೂ ಹತ್ತಾರು ಬಾದ್ಯತೆಗಳು. ಕೂಡಿಟ್ಟ ಹೊನ್ನು ಎಷ್ಟು ದಿನವೂ ಬಾಳದು. ಬಡವನಂತೆ ಧನಿಕನಿಗೂ ಇದು ತಟ್ಟಿಯೇ ತಟ್ಟುತ್ತದೆ. ಹೀಗಿರುವಾಗ ಎಲ್ಲರ ಸಹನೆಯ ಕಟ್ಟೆಯೂ ಒಡೆಯುವುದು ನಿಶ್ಚಿತ.

ಇಲ್ಲ, ಇದು ಸರಿಹೋಗಲೇ ಬೇಕು. ಯಾವ ರುಜಿನಕ್ಕೂ ಹೆದರಿ ಮನೆಯೊಳಗೆ ಕೂತಿರಲಾಗದು ದೀರ್ಘಕಾಲ. ಇದನ್ನು ನಾವು ಎದುರಿಸಲೇಬೇಕು. ನಿಂತಿರುವ ಈ ನಗರದ ಯಂತ್ರಕ್ಕೆ ಮತ್ತೆ ಚಾಲನೆ ದೊರಕಲೇಬೇಕು. ನಿಧಾನವಾಗಿಯಾದರೂ ಅದು ತಿರುಗಲು ಶುರುಮಾಡಲೇಬೇಕು. ನಾವೆಲ್ಲ ಕಬ್ಬಿನಂತೆ ಅದಕೆ ಬೈಯೊಡ್ಡಿಕೊಳ್ಳಲೇಬೇಕು. ಮತ್ತೆ ಕಾರ್ಖಾನೆಗಳ ಊದುಕೊಳವೆಗಳಿಂದ ಹೊಗೆ ಹೊಮ್ಮಬೇಕು. ಮತ್ತೆ ರೆಸ್ಟುರೆಂಟುಗಳ ಪಾಕಶಾಲೆಯಲ್ಲಿ ಒಲೆಗಳು ಹೊತ್ತಿಕೊಳ್ಳಬೇಕು. ಮತ್ತೆ ಎರಡು ಕೊಂಡರೆ ಒಂದು ಫ್ರೀ ಕೊಡುವ ಬಟ್ಟೆಯಂಗಡಿಗಳು ತೆರೆಯಬೇಕು.  ಬೀದಿಬದಿ ಮರಗಳಿಂದುದುರಿದ ಬಣ್ಣಪುಷ್ಪಗಳ ಮೇಲೆ ವಾಹನಚಕ್ರಗಳು ಉರುಳಬೇಕು. ಮಾರ್ಕೆಟ್ಟಿನಲ್ಲಿ ತರಕಾರಿಗೆ ಮುಗಿಬಿದ್ದು ಚೌಕಾಶಿ ಮಾಡಬೇಕು. ಥಿಯೇಟರಿನ ಗಾಂಧಿಕ್ಲಾಸಿನಲ್ಲಿ ಶಿಳ್ಳೆಗಳು ಮೊಳಗಬೇಕು. ಪಾರ್ಕಿನ ಮೂಲೆಯಲ್ಲಿ ಲಾಫ್ಟರ್ ಕ್ಲಬ್ಬಿನ ಸದಸ್ಯರು ಹುಚ್ಚುಚ್ಚಾಗಿ ನಗಬೇಕು.  ಶಾಲೆ-ಕಾಲೇಜುಗಳು ಪ್ರಾರಂಭವಾಗಿ ಹೊಸ ಪ್ರೇಮಗಳು ಮೊಳೆಯಬೇಕು. ಮದುವೆಗೂ ಮೊದಲೇ ನಡೆದ ರಿಸೆಪ್ಷನ್ನಿನಲ್ಲಿ ಉಡುಗೊರೆಗೆ ಸಾಲುಗಟ್ಟಬೇಕು. ಸಂಗೀತಕಾರಂಜಿಯಿಂದ ನೀರು ಚಿಮ್ಮಬೇಕು, ಗೂಡಂಗಡಿಯವ ಮೊಘಾಯ್ ಪಾನ್ ಸುತ್ತಿಕೊಡಬೇಕು, ಗೋಲ್ಗಪ್ಪಾವಾಲಾ ಕೈಯದ್ದಿ ಪುರಿಗಳಲ್ಲಿ ಪಾನಿ ತುಂಬಿಸಿಕೊಡಬೇಕು, ಹೂವಾಡಗಿತ್ತಿ ಮಾಲೆಮಲ್ಲಿಗೆಯನು ಮೊಳದಲ್ಲಳೆದುಕೊಡಬೇಕು. ಇದೆಲ್ಲ ಸರಿಹೋಗಲೇಬೇಕು.

ಸಿಗದೇ ಎಷ್ಟು ವರ್ಷವಾಯಿತು... ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಮನೆಗೆ ಬಾ. ಒಟ್ಟಿಗೇ ಕೂತು ಊಟ ಮಾಡೋಣ.

ಪ್ರೀತಿಯಿಂದ,

-ಸು