ಬಿಗ್ಬಜಾರಿನ ಪ್ರಖರ ದೀಪಬೆಳಕಲಿ
ಬೆಲೆಯ ಲೇಬಲ್ಲು ಹೊದ್ದು ಕೂತದ್ದಿಲ್ಲ..
ಮೇಳಗಳ ಮಳಿಗೆಯಲಿ ಮಂತ್ರಿವರ್ಯರ ಬಾಯಿ
ಸಿಹಿಮಾಡಿ ಫೋಟೋಗೆ ಪೋಸು ಕೊಟ್ಟದ್ದಿಲ್ಲ..
ರಟ್ಟಪೆಟ್ಟಿಗೆಯಲಿ ಘನಮಾಡಿ ತುಂಬಿಸಲ್ಪಟ್ಟು
ದೇಶಾಂತರ ರಫ್ತಾದದ್ದೂ ಇಲ್ಲ..
ಬೀದಿಬದಿಯ ತಳ್ಳುಗಾಡಿಯಲಿ ಬೀಳದಂತೆ ಪೇರಿಸ್ಪಟ್ಟು
ಮಾರಾಟವಾಗುವ ಭಾಗ್ಯ ಸಹ ಇಲ್ಲ..
ಕಾನನದ ಮಾಮರವೊಂದು ಮೈತುಂಬ ಪೂತು
ಇಬ್ಬನಿ ಬಿಸಿಲು ಗಾಳಿ ಮಳೆ ಕೋಗಿಲೆಕೂಗನ್ನೆಲ್ಲ ಸಹಿಸಿ
ಗೊಂಚಲುಗಳಲಿ ಮಿಡಿತೂಗಿ ಹಟಹಿಡಿದು ಮಾಗಿ ಹಣ್ಣಾಗಿ
ರಸದುಂಬಿ ಬೀಗಿ ಸಿಹಿಯಾಗಿ ಕೆಂಪಾಗಿ ಸಫಲತೆಯ ಪಡೆದು
ಊರ ಪೋರರಿಗೀಗ ಹಬ್ಬ.. ಹಿತ್ತಿಲ ಹಿಂದಿನ ಕಾಲುದಾರಿಯಲಿ
ಪುಟ್ಟಪಾದಗಳ ಓಡು. ಬಾಗುಮಟ್ಟಿಗಳೂ ತುರುಚಿಗಿಡಗಳೂ ಲೆಕ್ಕಕ್ಕಿಲ್ಲ.
ಮನೆಗಳನು ಮುಚ್ಚಿದರೂ ತೆರೆದೇ ಇರುವ ಈ ಕಾಡದಾರಿ
ಸೈಕಲ್ಲಿನಲ್ಲಿ ಬಂದವರನ್ನೂ ಟಯರ್ ಓಡಿಸಿಕೊಂಡು ಬಂದವರನ್ನೂ
ಒಟ್ಟಿಗೇ ತಲುಪಿಸುತ್ತದೆ ಸಾಸ್ವೆ ಮಾವಿನಮರದ ಬುಡಕೆ..
ತಣ್ಣೆಳಲ ಕೆಳಗೀಗ ಸರೀ ಬಡಿಗೆಗಾಗಿ ಹುಡುಕಾಟ
ಕಲ್ಲಲ್ಲೇ ಬೀಳಿಸುವೆವೆನ್ನುವ ಧೀರರ ಹಾರಾಟ
ಬೀಸಿ ಒಗೆದರೆ, ಪಕ್ಕದೂರ ನಾಚುಪೋರಿಯೂ ಮನಮೆಚ್ಚುವಂತೆ ಫಲಧಾರೆ
ಓಡಿ ಆಯುವ ಭರದಲ್ಲಿ ಚೂರೇ ಕೈತಾಕಿ ಕಣ್ತುಂಬ ಸಂಭ್ರಮತಾರೆ
ಬಡಿದು ಬೀಳಿಸಿ ಹೆಕ್ಕಿ ಗುಡ್ಡೆಹಾಕಿ ಇಡೀ ಹಣ್ಣು ಬಾಯೊಳಗಿಟ್ಟು
ರಸಹೀರಿ ಹೊಟ್ಟೆ ತುಂಬುವವರೆಗೂ ತಿಂದು ಕುಣಿದು ಕುಪ್ಪಳಿಸಿ
ನಾನಾ ಆಟವಾಡಿ ದಣಿದು ಅಲ್ಲೇ ತುಸು ವಿರಮಿಸಿ
ಇನ್ನೂ ಉಳಿದ ಹಣ್ಣುಗಳು ಬಕ್ಕಣದಲ್ಲೂ ಪುಟ್ಟ ಕೈಚೀಲದಲ್ಲೂ
ತುಂಬಿಸಲ್ಪಟ್ಟು ಮನೆ ಸೇರಿ, ಇಂದು ಮಧ್ಯಾಹ್ನದೂಟದ
ಸಾಸ್ವೆಯಲಿ ತೇಲುವ ಪುಟ್ಪುಟ್ಟ ಹಣ್ಣುಗಳು..
ಮೇಯ್ದು ಸಂಜೆ ಕೊಟ್ಟಿಗೆಗೆ ಮರಳಿದ ಗೌರಿ
ಹಾಕಿದ ಸಗಣಿಯಲ್ಲೂ ಪುಟ್ಪುಟ್ಟ ಓಟೆಗಳು.
ಸಾಸ್ವೆ ಮಾವಿನಹಣ್ಣು ಯಾವ ಮಾರ್ಕೆಟ್ಟಿನಲ್ಲೂ ಸಿಗುತ್ತಿಲ್ಲ...
ಆಪೋಸು ರಸಪುರಿಗಳ ನೀಟಾಗಿ ಕತ್ತರಿಸಿ ಸಿಪ್ಪೆ ಸಹ ತೆಗೆದು
ಪಿಂಗಾಣಿ ಬಟ್ಟಲಲಿ ಜೋಡಿಸಿ ಟೇಬಲಿನ ಮೇಲಿಟ್ಟಿದ್ದಾರೆ ಚಮಚದೊಂದಿಗೆ..
ಏಸಿಯಿಂದ ಬಂದ ತಂಪುಗಾಳಿಯಲ್ಲಿ ತೇಲಿಬರುತ್ತಿದೆ ಆ
ಕಾಡಮಾವಿನ ಮರದ ಸಾಸ್ವೆಹಣ್ಣಿನ ರುಚಿಯ ನೆನಪು..
ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ
ರಾತ್ರಿಯಡುಗೆಗೆ ಸಾಸ್ವೆಗಾಗುತ್ತಿತ್ತು ಎಂದು ನಿಟ್ಟುಸಿರಿಡುವ ಅಮ್ಮ.
Thursday, June 02, 2016
Wednesday, May 25, 2016
ಎಲ್ಲ ಹಕ್ಕಿಗಳಿಗೂ ಗೂಡು
‘ಯಾರಿಗೂ ಹೇಳ್ಬೇಡಿ’ ಅನ್ನೋ ಕೋಡ್ಲು ರಾಮಕೃಷ್ಣ ನಿರ್ದೇಶನದ ಸಿನೆಮಾ ನೋಡ್ತಿದ್ದೆ. ನೀವೂ ನೋಡಿರುತ್ತೀರಿ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗದ ಒಂದಷ್ಟು ಮಹಿಳೆಯರ ಕನಸನ್ನು ಬಂಡವಾಳ ಮಾಡಿಕೊಳ್ಳುವ ಒಬ್ಬಾತ, ತನ್ನ ಬುದ್ಧಿವಂತಿಕೆ ಮತ್ತು ನಯವಾದ ಮಾತುಗಳಿಂದ ಹೇಗೆ ಅವರನ್ನು ವಂಚಿಸುತ್ತಾನೆ ಎಂಬುದು ಸಿನೆಮಾ ಕತೆ. ಸಿನೆಮಾ ಪೂರ್ತಿ ಇರುವುದು ಒಂದು ವಟಾರದಲ್ಲಿನ ಗೃಹಿಣಿಯರ ಸ್ವಂತ ಮನೆ ಮಾಡುವ ಮಹದಾಸೆಯ ಸುತ್ತ. ಬಾಡಿಗೆ ಮನೆಯ ಸಂಕಷ್ಟಗಳೂ, ಸ್ವಂತ ಮನೆ ಇಲ್ಲ ಎಂಬುದು ಒಂದು ಮಾನಸಿಕ ಕೊರಗೇ ಆಗಿಬಿಡುವ ಪರಿಯೂ, ಸ್ವಗೃಹವೆಂಬ ಮರೀಚಿಕೆಯ ಬೆನ್ನೇರಿ ಹೊರಟ ಬಡ ಮತ್ತು ಮಧ್ಯಮ ವರ್ಗದವರ ಪಾಡು –ಎಲ್ಲವೂ ಈ ಚಿತ್ರದಲ್ಲಿ ಅತ್ಯದ್ಭುತವಾಗಿ ಬಿಂಬಿತವಾಗಿವೆ ಎಂದರೆ ನೀವು ‘ಚೆನ್ನಾಗ್ ಹೇಳಿದ್ರಿ’ ಎನ್ನದೇ ಇರಲಾರಿರಿ.
ನಮ್ಮ ಶಾಲೆಯ ಎರಡನೆಯ ಇಯತ್ತೆಯ ಕನ್ನಡ ಪಠ್ಯದಲ್ಲಿ ‘ನಮ್ಮ ಮನೆ’ ಎಂಬ ಪಾಠವೊಂದಿತ್ತು. ಈ ಪಾಠದಲ್ಲಿ ಇದ್ದ ಮನೆ, ಒಳಾಂಗಣ, ಮನೆಯಲ್ಲಿನ ಪೀಠೋಪಕರಣಗಳು, ಮನೆಯ ಹೊರಗಿನ ವಾತಾವರಣಗಳ ವಿವರಗಳನ್ನೆಲ್ಲ ನಾವು ವಿದ್ಯಾರ್ಥಿಗಳು ನಮ್ನಮ್ಮ ಮನೆಗಳಿಗೆ ಹೋಲಿಸಿ ರೋಮಾಂಚಿತರಾಗುತ್ತಿದ್ದೆವು. ನಮ್ಮ ಮಾಸ್ತರರೂ ಈ ಪಾಠ ಮಾಡಿದ ಮರುದಿನದ ಹೋಂವರ್ಕಾಗಿ ನಮ್ನಮ್ಮ ಮನೆಗಳ ಸ್ವರೂಪವನ್ನು ವಿವರವಾಗಿ ಬರೆದುಕೊಂಡು ಬರುವಂತೆ ಹೇಳಿರುತ್ತಿದ್ದರು. ನಮ್ಮ ಮನೆಯನ್ನು ಕೂಲಂಕುಷವಾಗಿ ನಾವು ನೋಡಿದ್ದೂ ಆಗಲೇ. ಮನೆಗೆ ಎಷ್ಟು ಮೆಟ್ಟಿಲಿದೆ, ಜಗುಲಿಯಲ್ಲಿ ಎಷ್ಟು ಕುರ್ಚಿಯಿದೆ, ಅಡುಗೆಮನೆಯ ನಾಗಂದಿಗೆ ನಮ್ಮ ಕೈಗೆ ಸಿಗದಂತಿದೆ, ಅಪ್ಪ-ಅಮ್ಮ ಮಲಗುವ ಮಂಚದ ಕೆಳಗೇನಿದೆ, ಅಜ್ಜಿಯ ಕೋಲು ಯಾಕೆ ಬಾಗಿಲ ಹಿಂದೇ ಅಡಗಿಕೊಂಡಿರುತ್ತೆ, ನಾಯಿ ಜಾಕಿಯ ಮಲಗುವ ಮೂಲೆಗೆ ಕಟ್ಟಿದ ಸರಪಳಿ ಎಷ್ಟುದ್ದವಿದೆ ಎಂಬೆಲ್ಲ ವಿವರಗಳು ಅದೇ ಮೊದಲ ಸಲ ದಾಖಲಾದವು.
ನಮ್ಮ ಮನೆಯ ಮಾಡು ಸೋಗೆಯಿಂದ ಹೆಂಚಿಗೆ ಬಡ್ತಿ ಪಡೆದ ಕತೆಯನ್ನು ಅಪ್ಪ ಆಗಾಗ ಹೇಳುತ್ತಿದ್ದ. ಅಜ್ಜ ಕಟ್ಟಿಸಿದ್ದ ಮಣ್ಣು ಗೋಡೆಯ ಮನೆಗೆ ಹೆಂಚು ಹೊದಿಸುವ ಮೂಲಕವೇ ತನ್ನ ಅಧಿಕಾರವನ್ನು ಶುರು ಮಾಡಿದ ಅಪ್ಪ, ಆಮೇಲೆ ಆ ಮನೆ ಕೆಡವಿ ಹೊಸ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸಗಾಥೆಯೇ. ಅನೇಕ ಮಳೆಗಾಲಗಳನ್ನು ಕಂಡಿದ್ದ ಆ ನಮ್ಮ ಮನೆಯ ಮಣ್ಣಿನ ಗೋಡೆಗಳನ್ನು ಇಲಿಗಳು ಕೊರೆದು ದೊರಗು ಮಾಡಿದ್ದರೆ, ಬಾಗಿಲು-ಕಿಟಕಿ-ಕಂಬಗಳನ್ನು ವರಲೆ ಹುಳುಗಳು ತಿಂದು ಜೀರ್ಣ ಮಾಡಿದ್ದವು. ಹೆಂಚಿನ ಮಾಡಿಗೆ ಹಾಕಿದ್ದ ಅಡಿಕೆ ದಬ್ಬೆಗಳಂತೂ ಪೂರ್ತಿ ಲಡ್ಡಾಗಿ ಜೋರು ಗಾಳಿಯೋ ಮಳೆಯೋ ಬಂದರೆ ಸೂರೇ ಕಳಚಿ ಬೀಳಬಹುದೆಂಬ ಭಯವೂ ಇತ್ತು. ಮನೆಗೆ ಬಂದ ನೆಂಟರು ಅಕಸ್ಮಾತ್ ಕತ್ತೆತ್ತಿ ಮೇಲೆ ನೋಡಿದರೆ ಬೆಚ್ಚಿ ಬೀಳುವಂತೆ ಮಾಡು ಒಂದು ಕಡೆ ವಾಲಿತ್ತು ಸಹ. ಹೀಗಾಗಿ ಈ ಅಭ್ಯಾಗತರನ್ನು ಭಯಮುಕ್ತಗೊಳಿಸಲು ನಾವು ಬಿಳಿಯ ಸಿಮೆಂಟ್ ಚೀಲಗಳನ್ನು ಹೊಲಿದು ದೊಡ್ಡ ಶೀಟ್ ಮಾಡಿ ಇಡೀ ಮನೆಗೆ ‘ಫಾಲ್ ಸೀಲಿಂಗ್’ ಥರ ಹೊದಿಸಿಬಿಟ್ಟಿದ್ದೆವು. ಜೋರು ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದ ನೀರು ಈ ಫಾಲ್ ಸೀಲಿಂಗ್ ಮೇಲೆ ಶೇಖರಗೊಂಡು ಅಲ್ಲಲ್ಲೇ ಜೋತುಕೊಂಡಿರುತ್ತಿತ್ತು. ಹಾಗೆ ಶೇಖರಗೊಂಡ ನೀರನ್ನು ನಾವು ಅಲ್ಲಲ್ಲೇ ಒಂದು ದಬ್ಬಣ ಹೆಟ್ಟಿ ಕೆಳಗೆ ಬಕೆಟ್ ಹಿಡಿದು ಬಸಿದುಕೊಳ್ಳುತ್ತಿದ್ದೆವು.
ಅಡಿಕೆಗೆ ರೇಟ್ ಬಂದ ಒಂದು ವರ್ಷ ಅಪ್ಪ ಈ ಮನೆ ಕೆಡವಿ ಹೊಸ ಮನೆ ಕಟ್ಟಿಸುವುದಾಗಿ ಘೋಷಿಸಿದ. ಆಟವಾಡುವಾಗ ಮರಳಿನಲ್ಲೋ, ಮಣ್ಣಿನಲ್ಲೋ, ಕೋಲಿನಿಂದಲೋ ಮನೆ ಕಟ್ಟಿಯಷ್ಟೇ ಗೊತ್ತಿದ್ದ ನನಗೆ, ಹೊಸದೊಂದು ವಾಸದ ಮನೆ ಕಟ್ಟಬೇಕು ಎಂದರೆ ಅದಕ್ಕೆ ಎಷ್ಟು ಹಣ ಬೇಕು, ಅಪ್ಪ ಅದನ್ನು ಎಲ್ಲಿಂದ ಹೊಂದಿಸುತ್ತಾನೆ, ಎಷ್ಟು ಪರಿಶ್ರಮ ಬೇಕು –ಎಂಬ್ಯಾವುದರ ಅರಿವೂ ಇರಲಿಲ್ಲವಷ್ಟೇ? ಆದರೆ ಅಪ್ಪನಿಗೆ ಅದು ಹೇಗೆ ಎಲ್ಲಾ ಕೂಡಿ ಬಂತೋ, ಎರಡು ವರ್ಷದೊಳಗೆ ಹೊಸ ಮನೆ ಎದ್ದು ನಿಂತಿತು. ಆ ಮನೆ ಕಟ್ಟುವಷ್ಟು ಕಾಲ ನಾವು ಬಾವಿಮನೆಯ ಪುಟ್ಟ ಜಾಗದಲ್ಲಿ ಇದ್ದುದು. ಹಳೇ ಮನೆ ಕೆಡವುವ ಭಾವಪೂರ್ಣ ಸನ್ನಿವೇಶದಿಂದ ಹೊಸ ಮನೆಗೆ ಒಕ್ಕಲಾಗುವ ಸಂತೋಷದ ಘಳಿಗೆಯವರೆಗೆ ದಿನಗಳು ನೋಡನೋಡುತ್ತ ಕಳೆದವು. ಫೌಂಡೇಶನ್ ಹಾಕುವುದೇನು, ದಿನವೂ ಕ್ಯೂರಿಂಗ್ ಮಾಡುವುದೇನು, ಮರಳು-ಜಲ್ಲಿಗಳ ಲಾರಿಗಳಿಗೆ ಕಾಯುವುದೇನು, ಮಟಗೋಲಿಟ್ಟು ಅಳೆಯುತ್ತ ಇಟ್ಟಿಗೆಗಳನ್ನು ಜೋಡಿಸುವ ಮೇಸ್ತ್ರಿಯ ಕೆಲಸ ನೋಡುವುದೇನು, ಬಂದವರೆಲ್ಲ ಹೊಸಹೊಸ ಐಡಿಯಾ ಕೊಡುವುದೇನು, ವಾಸ್ತು ಪ್ರಕಾರ ಕಟ್ಟಿ ಅಂತ ಹೆದರಿಸುವವರೇನು, ಕಳ್ಳನಾಟಕ್ಕಾಗಿ ರಾತ್ರಿ ಕಾರ್ಯಾಚರಣೆ ನಡೆಸುವುದೇನು, ವಾಸ್ತುಬಾಗಿಲಿಗೆ ಆಚಾರಿ ಹೂಬಳ್ಳಿ ಕೆತ್ತುವಾಗ ಪಕ್ಕ ನಿಂತು ವೀಕ್ಷಿಸುವುದೇನು, ಸ್ಲಾಬ್ ಹಾಕುವ ದಿನ ನೂರಾರು ಕೆಲಸಗಾರರಿಗೆ ಅಡುಗೆ ಮಾಡುವುದೇನು... ಓಹೋಹೋ! ಮೇಸ್ತ್ರಿಗಳು, ಆಚಾರಿಗಳು, ವೈರಿಂಗಿನವರು, ಟೈಲ್ಸ್ ಹಾಕುವವರು, ಪೇಂಟಿಂಗ್ ಮಾಡುವವರು –ಹೀಗೆ ಬೇರೆಬೇರೆ ವಿಭಾಗದ ಹತ್ತಾರು ಜನಗಳ ಜೊತೆಗೆ ಹೆಣಗಾಡುತ್ತ, ಮನೆ ಕಟ್ಟಿ ಮುಗಿಯಿತು ಎಂಬಷ್ಟರಲ್ಲಿ ‘ಮನೆ ಕಟ್ಟಿ ನೋಡು’ ಅನ್ನೋ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬ ಅರಿವು ನಮಗೆಲ್ಲ ಆಗಿತ್ತು. ಅಂತೂ ಅಪ್ಪ ಸಾಧಿಸಿಯೇಬಿಟ್ಟಿದ್ದ. ನೂತನ ಗೃಹಪ್ರವೇಶಕ್ಕೆ ಬಂದವರೆಲ್ಲ ‘ಚನಾಗಿದೆ’, ‘ಸಖತ್ ಪ್ಲಾನ್ ಮಾಡಿ ಕಟ್ಸಿದೀರಿ’, ‘ಎಲ್ಲೂ ಸ್ವಲ್ಪ ಜಾಗಾನೂ ವೇಸ್ಟ್ ಮಾಡಿಲ್ಲ’ ಅಂತೆಲ್ಲ ಹೊಗಳಿ ನಮ್ಮ ಹಿಗ್ಗು ಹೆಚ್ಚಿಸಿದ್ದರು.
ಅಂತೂ ಊರ ಮೊದಲ ಆರ್ಸಿಸಿ ಮನೆಯಾಗಿ ನಮ್ಮ ಮನೆ ಥಳಥಳ ಹೊಳೆಯಿತು. ಹಿಂದೆಯೇ ಕಟ್ಟಲ್ಪಟ್ಟ, ನಮ್ಮ ಮನೆಗಿಂತ ಬೃಹತ್ತಾದ, ಮೆತ್ತು-ಮೇಲ್ಮೆತ್ತುಗಳೂ ಇರುವ, ಆದರೂ ಹಳೇ ಶೈಲಿಯ ಹೆಂಚು ಹೊದಿಸಿದ ನಮ್ಮೂರ ಅನೇಕ ಮನೆಗಳಿಗಿಂತ ನಮ್ಮ ಮನೆಯೇ ಪುಟ್ಟಗೆ ಚೆನ್ನಾಗಿದೆ ಅಂತ ನಮಗೆ ನಾವೇ ಅಂದುಕೊಂಡೆವು. ‘ನಿಮ್ಮನೆ ಹಳ್ಳಿಮನೆ ಥರಾನೇ ಇಲ್ಲ, ಪೇಟೆ ಮನೆ ಇದ್ದಂಗಿದೆ’ ಅಂತ ಯಾರಾದರೂ ಹೇಳಿದರೆ ಅದು ಹೊಗಳಿದ್ದೋ ತೆಗಳಿದ್ದೋ ಗೊತ್ತಾಗದೆ ಒದ್ದಾಡಿದೆವು. ಸಿಮೆಂಟಿನ ಗೋಡೆಗಳಿಗೆ ಕನ್ನ ಕೊರೆಯಲಾಗದೆ ಇಲಿಗಳು ಈಗ ಹಳೆಯ ಕೊಟ್ಟಿಗೆಮನೆ ಸೇರಿದವು. ಪಾಲಿಶ್ ವಾಸನೆಯ ಮರಮಟ್ಟುಗಳು ಗೆದ್ದಲು ಹುಳುಗಳಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಹಳೇಮನೆಯಲ್ಲಿ ಅನೇಕ ಜೀವಿಗಳೊಂದಿಗೆ ಒಂದಾಗಿ ಸಹಜೀವನ ನಡೆಸುತ್ತಿದ್ದ ನಾವು, ಈ ಹೊಸಮನೆಯಲ್ಲಿ ಮನುಷ್ಯರು ಮಾತ್ರ ಜೀವಿಸುವಂತಾಯ್ತು. ನಮ್ಮ ಪುಣ್ಯಕ್ಕೆ ಒಂದೆರಡು ತಿಂಗಳಲ್ಲಿ ಹಲ್ಲಿಗಳೂ, ನೊಣಗಳೂ ಮನೆಯೊಳಗೆ ಸೇರಿಕೊಂಡು ನಮಗೆ ಕಂಪನಿ ಕೊಟ್ಟವು.
‘ದಟ್ಟ ಹಸಿರು-ಅಲ್ಲಲ್ಲಿ ಮನೆ’ ಎಂಬಂತಿರುವ ಹಳ್ಳಿಯಿಂದ, ‘ಎಲ್ಲೆಲ್ಲೂ ಮನೆಗಳು-ಅಲ್ಲಲ್ಲಿ ಹಸಿರು’ ಎಂಬಂತಿರುವ ನಗರಕ್ಕೆ ಬಂದಮೇಲೆ ಮನೆಗಳ ಬಗ್ಗೆ ಇರುವ ನನ್ನ ಕಲ್ಪನೆಯೇ ಬದಲಾಯಿತು. ಮನೆ ಎಂದರೆ ಬರೀ ಕಟ್ಟಡವಲ್ಲ, ಅದೊಂದು ಸಜೀವ ಭಾವಕೋಶ ಎಂದುಕೊಂಡಿದ್ದ ನನ್ನ ಊಹನೆಯನ್ನು ತೊಡೆದುಹಾಕಿದ್ದು ಈ ನಗರ. ಮನೆ ಎಂದರೆ ಕಳೆ ತುಂಬಿದ ಅಂಗಳ, ಜಗುಲಿಯ ಟೇಬಲ್ಲಿನ ಮೇಲಿನ ಕವಳದ ಹರಿವಾಣ, ನಡುಮನೆಯ ಕತ್ತಲು, ಅಡುಗೆಮನೆ ಗ್ಯಾಸ್ಕಟ್ಟೆ ಮೇಲೆ ಕೂತು ಹೇಳಿದ ಕತೆ, ಬೆಡ್ರೂಮಿನ ಮಂಚದ ಕೆಳಗೆ ಪೇರಿಸಿರುವ ಚೀನೀಕಾಯಿ, ಹಿತ್ತಿಲ ಕಟ್ಟೆಯ ಹರಟೆಗೆ ಸಾಥಿಯಾಗುವ ತಂಗಾಳಿ, ಬಾವಿಯ ನೀರಲ್ಲಿ ಪ್ರತಿಫಲಿತ ಗಡಗಡೆಯ ಬಿಂಬ, ಕೊಟ್ಟಿಗೆಯಲ್ಲಿನ ಹೊಸ ಪುಟ್ಟಿಕರುವಿನ ಜಿಗಿತ, ಅಟ್ಟದ ಕಂಬಕ್ಕೆ ಸಿಕ್ಕಿಸಿದ ಕುಡುಗೋಲು ...ಎಂಬೆಲ್ಲ ಚಿತ್ರಗಳನ್ನು ಅಳಿಸಿಹಾಕಿ, ಮನೆ ಎಂದರೆ ಒಂದೋ-ಎರಡೋ-ಮೂರೋ ಬಿಎಚ್ಕೆಗಳಲ್ಲಿ ಅಳೆಯಲ್ಪಡುವ, ಬಾಡಿಗೆಗೆ ಕೊಡಲೆಂದೇ ಕಟ್ಟಿಸಿದ ಬೆಂಕಿಪೊಟ್ಟಣಗಳಂತ ಅಚೇತನ ನಿಕೇತನಗಳು ಎಂಬ ವಿಷಯ ಅರಗಿಸಿಕೊಳ್ಳಲೇ ಕಷ್ಟವಾಗಿತ್ತು.
ಆದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದೇ ಮನುಷ್ಯನ ಸ್ವಭಾವವಲ್ಲವೇ? ಹೀಗಾಗಿ ದುಡಿಮೆಯ ಜಿದ್ದಿಗೆ ಬಿದ್ದು ನಗರ ಸೇರಿದ ನಾನೂ ಈ ಪುಟ್ಪುಟ್ಟ ಮನೆಗಳಲ್ಲೇ ಸೌಂದರ್ಯ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ. ಬಾಡಿಗೆ ಮನೆಗೆಂದು ಬೀದಿಬೀದಿ ಅಲೆಯುವ, ಟು-ಲೆಟ್ ಬೋರ್ಡುಗಳನ್ನು ದೂರದಿಂದಲೇ ಗುರುತಿಸುವ, ರಿಯಲ್ ಎಸ್ಟೇಟ್ ಏಜೆಂಟುಗಳ ಜತೆ ಗುದ್ದಾಡುವ, ಓನರುಗಳ ಜತೆ ವ್ಯವಹರಿಸುವ, ಒಂದು ಮನೆಯಿಂದ ಮತ್ತೊಂದು ಮನೆಗೆ ಆಗಾಗ ಪೆಟ್ಟಿಗೆ ಕಟ್ಟುವ ಜಾಣ್ಮೆ ಬೆಳೆಸಿಕೊಂಡೆ. ಹೀಗೆ ಮನೆಯೊಂದನ್ನು ಪ್ರವೇಶಿಸುವಾಗ ಯಾರೋ ತೊಟ್ಟು ಬಿಟ್ಟ ಬಟ್ಟೆ ತೊಡುತ್ತಿದ್ದೇನೆ ಎನ್ನುವಂತ ಅವಮಾನವೇನೂ ಆಗುತ್ತಿರಲಿಲ್ಲ. ಈ ಮನೆಗಳೂ ಈಗಾಗಲೇ ಯಾರ್ಯಾರೋ ಇದ್ದು ಹೋಗಿದ್ದ ಜಾಗವಿದು ಎಂಬ ಲಕ್ಷಣಗಳನ್ನೆಲ್ಲ ತೊಡೆದುಹಾಕುವಂತೆ ಒಮ್ಮೆ ಬಣ್ಣ ಹೊಡೆಸಿಕೊಂಡು, ಸಣ್ಣ-ಪುಟ್ಟ ರಿಪೇರಿ ಮಾಡಿಸಿಕೊಂಡು ಚಂದ ಪ್ರಸಾದನಕ್ಕೊಳಗಾಗಿ ಹೊಸ ಅತಿಥಿಯನ್ನು ಸ್ವಾಗತಿಸುವವು. ನಗರಕ್ಕೆ ಬ್ಯಾಚುಲರ್ರಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ, ಟೆರೇಸಿನ ಮೇಲಿನ ಒಂಟಿಕೋಣೆಯಿಂದ ಗ್ರೌಂಡ್ ಫ್ಲೋರಿನ ಥ್ರೀ ಬಿಎಚ್ಕೆ ಮನೆಯವರೆಗೆ, ಒಂಟಿಯಿಂದ ಜಂಟಿಯಾಗಿ ಮಕ್ಕಳೊಂದಿಗನಾಗಿ ಸಂಸಾರವನ್ನು ಬೆಳೆಸುತ್ತ ಸದೃಢನಾಗುತ್ತ ಹೋಗುವುದನ್ನು ಈ ನಿರ್ಜೀವ ಕಟ್ಟಡಗಳು ತಮ್ಮ ಸಿಮೆಂಟಿನ ಕಣ್ಣುಗಳಿಂದ ನೋಡುವವು. ಬರೀ ಒಂದು ಚಾಪೆ, ಬಟ್ಟೆಗಂಟು, ನಾಲ್ಕು ಪಾತ್ರೆಗಳೊಂದಿಗೆ ಶುರುವಾಗಿದ್ದ ಅವನ ಜೀವನ, ಬೆಳೆಯುತ್ತ ಬೆಳೆಯುತ್ತ ಒಂದು ಲಾರಿಯಲ್ಲಿ ಹಿಡಿಸಲಾಗದಷ್ಟು ಸಾಮಗ್ರಿಗಳ ಆಗರವಾಗುವುದಕ್ಕೆ ನಗರದ ಮನೆಗಳು ಸಾಕ್ಷಿಯಾಗುವವು.
ಮತ್ತು ಹಾಗೆ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ವರ್ಗವಾಗುತ್ತ ಈಗ ಗ್ರೌಂಡ್ ಫ್ಲೋರಿನ ಮನೆಯಲ್ಲಿರುವ ಈತನ ಮುಂದಿನ ವಾಸ್ತವ್ಯ ‘ಸ್ವಂತ ಮನೆ’ಯಲ್ಲಿ ಎಂಬುದೂ ಸ್ಪಷ್ಟ. ‘ಪ್ರತಿ ಸಲ ಮನೆ ಬದಲಿಸ್ಬೇಕಾದ್ರೂ ಸಾಮಾನು ಸೇರ್ಸೀ ಸೇರ್ಸೀ ಸಾಕಾಯ್ತು ನಂಗೆ.. ಇನ್ನೊಂದ್ ವರ್ಷ ಬಿಟ್ಟು ನೀವು ಮತ್ತೆ ಶಿಫ್ಟ್ ಮಾಡ್ತೀನಿ ಅಂದ್ರೆ ನಾನಂತೂ ಬರಲ್ಲ. ಸ್ವಂತ ಮನೆ ಮಾಡಿ, ಪರ್ಮನೆಂಟಾಗಿ ಒಕ್ಕಲಾಗೋಣ’ ಎಂಬ ಹೆಂಡತಿಯ ಚಿತಾವಣೆಗೆ ಮಣಿದ ಗಂಡ ನಿಧಾನಕ್ಕೆ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಸೇವಿಂಗ್ಸ್ ಇದೆ, ಚೀಟಿ ಹಣ ಎಷ್ಟು ಬರಬಹುದು, ನನ್ನ ಯೋಗ್ಯತೆಗೆ ಎಷ್ಟು ಸಾಲ ಸಿಗಬಹುದು ಎಂಬೆಲ್ಲ ಲೆಕ್ಕಾಚಾರಕ್ಕೆ ಬೀಳುತ್ತಾನೆ. ‘ಈಗೆಲ್ಲಾ ಸೈಟ್ ತಗೊಂಡು ಮನೆ ಕಟ್ಟಿಸಿ ಉದ್ಧಾರ! ಅಲ್ಲದೇ ಸೈಟ್ ಸಿಕ್ಕರೂ ಅದು ನಗರದ ಹೊರಭಾಗದಲ್ಲಿ ಸಿಗೋದು. ಅಲ್ಲಿ ಮನೆ ಕಟ್ಟಿಕೊಂಡು ಅಷ್ಟೆಲ್ಲ ದೂರದ ಆಫೀಸಿಗೆ ಈ ಟ್ರಾಫಿಕ್ಕಲ್ಲಿ ದಿನಾ ಓಡಾಡ್ತೀಯಾ? ಸುಮ್ನೇ ಒಂದು ಫ್ಲಾಟ್ ತಗೋ. ಈ ಬಾಡಿಗೆ ಕಟ್ಟೋ ದುಡ್ಡಲ್ಲೇ ಸಾಲದ ಕಂತು ಕಡ್ಕೊಂಡು ಹೋದ್ರೆ ಆಯ್ತು’ ಎಂಬ ಗೆಳೆಯರ ಸಲಹೆ ಇವನನ್ನು ಯೋಚಿಸುವಂತೆ ಮಾಡುತ್ತದೆ. ನಿಜವಾಗಿಯೂ ಫ್ಲಾಟ್ ಕೊಳ್ಳುವಷ್ಟು ಹಣ, ಆಮೇಲೆ ಆ ಸಾಲ ತೀರಿಸುವಷ್ಟು ಶಕ್ತಿ ತನ್ನಲ್ಲಿದೆಯಾ ಎಂಬ ವಿಶ್ಲೇಷಣೆಗೆ ತೊಡಗುತ್ತಾನೆ. ದಿನವೂ ನ್ಯೂಸ್ಪೇಪರುಗಳಲ್ಲಿ ನೋಡಿ ಉಪೇಕ್ಷಿಸುತ್ತಿದ್ದ ಜಾಹೀರಾತುಗಳೆಡೆಗೆ ಕಣ್ಣು ಹಾಯುತ್ತದೆ. ಯಾರೋ ಎಲ್ಲೋ ಮನೆ ಖರೀದಿಗಿದೆ ಎಂದಾಗ ಕಿವಿ ನೆಟ್ಟಗಾಗುತ್ತದೆ.
ನಗರದ ತುಂಬ ಮಾರಲೆಂದೇ ಕಟ್ಟಿದ ಅಪಾರ್ಟ್ಮೆಂಟುಗಳು, ಬಾಡಿಗೆ ಕೊಡಲೆಂದೇ ಕಟ್ಟಿದ ಮನೆಗಳ ನಡುವಿನ ರಸ್ತೆಯಲ್ಲಿ ನಿರಾಶ್ರಿತ ಉದ್ಯೋಗಾಕಾಂಕ್ಷಿ ಒಂಟಿಯಾಗಿ ನಡೆಯುತ್ತಾನೆ. ಪಾರ್ಕಿನ ಬೆಂಚಿನ ಮೇಲೆ ಕೂತು, ಅಲ್ಲೇ ಪಕ್ಕದ ಮರದ ಮೇಲೆ ಹೊಸ ಗೂಡು ಕಟ್ಟುತ್ತಿರುವ ಹಕ್ಕಿಯೊಂದರ ಚುರುಕು ಕೆಲಸ ನೋಡುತ್ತಾನೆ. ಚಿಲಿಪಿಲಿಗುಟ್ಟಲೂ ಸಮಯವಿಲ್ಲವೆಂಬಂತೆ ಹೊಂಚಿ ತಂದ ಕಡ್ಡಿಗಳನ್ನು ಜೋಡಿಸಿ ಹೊಲಿಯುವಲ್ಲಿ ನಿರತವಾಗಿರುವ ಹಕ್ಕಿ, ಆ ಗಡಿಬಿಡಿಯಲ್ಲೂ ಓರೆಗಣ್ಣಲ್ಲಿ ಇವನೆಡೆಗೆ ನೋಡುತ್ತದೆ. ಆ ನೋಟದಿಂದ, ಚಿಕ್ಕವನಿದ್ದಾಗ ಹಕ್ಕಿ ಹಿಡಿಯಲು ತನ್ನೊಂದಿಗೆ ಕಾಡಿಗೆ ಬರುತ್ತಿದ್ದ ಗೆಳೆಯನ ನೆನಪಾಗುತ್ತದೆ. ಕಳೆದ ಸಲ ಊರಿಗೆ ಬಂದಾಗ ಫೋನ್ ನಂಬರ್ ಕೊಟ್ಟುಹೋಗಿದ್ದು ಹೊಳೆದು, ಪಾಕೀಟಿನಲ್ಲಿ ತಡಕಾಡಿ, ಅಲ್ಲೇ ಕಾಯ್ನ್ ಬೂತಿನಿಂದ ಒಂದು ಫೋನ್ ಮಾಡಿಯೇಬಿಡುತ್ತಾನೆ. ‘ಬಾರೋ ಗೆಳೆಯಾ... ಕೆಲಸ ಸಿಕ್ಕು ಬಾಡಿಗೆ ಮನೆ ತೆಗೆದುಕೊಳ್ಳುವಷ್ಟು ಚೈತನ್ಯ ಬರುವವರೆಗೂ ನಮ್ಮನೆಯಲ್ಲೇ ಇರು. ಸ್ವಲ್ಪಾನೂ ಸಂಕೋಚ ಪಟ್ಕೋಬೇಡ’ ಎಂಬ ಭರವಸೆ ಅತ್ತಲಿಂದ ಸಿಕ್ಕಿದ್ದು ಈತನ ಮುಖಭಾವದಿಂದಲೇ ಗೊತ್ತಾಗುತ್ತದೆ. ಎಲ್ಲ ಹಕ್ಕಿಗಳಿಗೂ ಗೂಡು ಕಲ್ಪಿಸುವ ಈ ನಗರದ ಅಗಾಧತೆ ಮತ್ತು ಇನ್ನೂ ಉಳಿದುಕೊಂಡಿರುವ ಆತ್ಮೀಯತೆಯೆಡೆಗೆ ಬೆರಗಾಗುತ್ತದೆ. ಪಾರ್ಕಿನ ಮರದ ಹಕ್ಕಿಯೆಡೆಗೆ ಕೃತಜ್ಞತೆಯಲ್ಲಿ ಕಣ್ಣು ಮಿಟುಕಿಸುತ್ತಾನೆ.
ನಗರದ ಏಕತಾನತೆ ಎಲ್ಲರಿಗೂ ಈಗ ಬೇಸರ ತಂದಿದೆ. ಮೊನ್ನೆ ಹೆಂಡತಿ ಹೇಳುತ್ತಿದ್ದಳು: ‘ಇನ್ನೊಂದಷ್ಟು ವರ್ಷ ಇಲ್ಲಿದ್ದು ದುಡ್ಡು ಮಾಡಿಕೊಂಡು ಊರಿಗೆ ಹೋಗಿಬಿಡೋಣ. ಹೇಗೂ ನಿಮ್ಮಪ್ಪ ಕಟ್ಟಿಸಿದ ಮನೆ ಗಟ್ಟಿಮುಟ್ಟಾಗಿ ಚೆನ್ನಾಗಿದೆ. ಅದರ ಮೇಲೆ ಇನ್ನೊಂದು ಫ್ಲೋರ್ ಕಟ್ಟಿಸಿ ಮೇಲೆ ಹೆಂಚು ಹೊದಿಸೋಣ. ಮತ್ತೆ ಆರ್ಸಿಸಿ ಬೇಡ. ಹಳ್ಳಿಮನೆ ಅಂದ್ರೆ ಹಳ್ಳಿಮನೆ ಥರಾನೇ ಇರ್ಬೇಕು. ಬೇಕಿದ್ರೆ ಪಕ್ಕದಲ್ಲಿ ಒಂದು ಸೋಗೆಯ ಗುಡಿಸಲು ಕಟ್ಟಿಸಿ ಹೋಮ್ಸ್ಟೇ ಶುರು ಮಾಡೋಣ. ಈಗಂತೂ ಈ ಪೇಟೆ ಮಂದಿಗೆ ಹಸಿರು-ನೀರು-ಮಣ್ಣು ರಸ್ತೆ ಇರೋ ಹಳ್ಳಿಗಳಿಗೆ ಹೋಗಿ ಗುಡಿಸಲುಗಳಂತಹ ಮನೆಯಲ್ಲಿ ಇದ್ದು ವೀಕೆಂಡ್ ಕಳೆದು ಬರೋದು ಶೋಕಿಯಾಗಿಬಿಟ್ಟಿದೆ. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ರೆ ಆಯ್ತು’ ಅಂತ.
ಹತ್ತಾರು ವರ್ಷದ ಹಿಂದೆ, ಊರಿಗೆ ಒಂದೇ ಆರ್ಸಿಸಿ ಮನೆ ಅಂತ ನಾವು ಖುಷಿ ಪಟ್ಟಿದ್ದು ನೆನಪಾಯಿತು. ಈಗ ಊರಲ್ಲೂ ಅನೇಕ ಹೊಸಮನೆಗಳು ಎದ್ದುನಿಂತಿವೆ. ಒಂದೆಡೆ ಆಧುನಿಕತೆಯ ಹೆಸರಲ್ಲಿ ತಳುಕು-ಬಳುಕು ಮೆರೆಯುತ್ತಿದ್ದರೆ, ಇನ್ನೊಂದೆಡೆ ಪುರಾತನಕ್ಕೆ ಮರಳುವ – ಅದೇ ಚಂದ ಎಂದು ಹೇಳುವ ಮನಸುಗಳೂ ಜಾಸ್ತಿಯಾಗುತ್ತಿವೆ. ಗಗನಚುಂಬಿ ಕಟ್ಟಡಗಳು, ಇಟಾಲಿಯನ್ ಸ್ಟೈಲ್ ಕಿಚನ್, ಫಳಫಳ ಗ್ರಾನೈಟ್ ನೆಲಹಾಸು, ಪಿಂಗಾಣಿಯ ಸಿಂಕು, ಬಿಳಿಬಿಳಿ ಬಚ್ಚಲಲ್ಲಿನ್ನ ಬಾತ್ಟಬ್ಬು, ಇತ್ಯಾದಿಗಳ ಮೆರವಣಿಗೆಯ ಜತೆಜತೆಯಲ್ಲೇ, ಹಳ್ಳಿಯ ಸಾದಾಸೀದಾ ಮನೆಗಳು, ಮರದ ಕೆತ್ತನೆ ಕಂಬಗಳು, ಕೆಂಪು ಗಾರೆ ನೆಲ, ಮಾಳಿಗೆಯ ಮುಚ್ಚಿಗೆ, ಬಚ್ಚಲ ಹಂಡೆಯ ನೀರು, ಹಳೆಯ ಪೀಠೋಪಕರಣಗಳಿಂದ ಕೂಡಿದ ತಾವುಗಳೆಡೆಗಿನ ಆಕರ್ಷಣೆ ಹೆಚ್ಚಾಗುತ್ತಿದೆ. ಸರಳತೆಯಲ್ಲೇ ಮನೆಗಳಿಗೊಂದು ಆಪ್ತತೆ ಬರುತ್ತದೆ ಎಂಬ ಭಾವ ಮತ್ತಷ್ಟು ದೃಢವಾಗುತ್ತಿದೆ.
ಅಪ್ಪನಿಗೆ ಫೋನ್ ಮಾಡಿ ಹೆಂಡತಿ ಹೇಳಿದ ವಿಚಾರ ಅರುಹುತ್ತೇನೆ. ‘ಈಗ ಇರೋ ಮನೇನೆ ಗುಡಿಸಿ-ಸಾರಿಸಿ ಮಾಡೋರ್ ಇಲ್ಲ, ಇನ್ನು ಮೇಲೆ ಬೇರೆ ಕಟ್ಟಿಸಿದ್ರೆ ಏನೋ ಗತಿ?’ ಅಂತ ಕೇಳುತ್ತಾನೆ. ‘ತಾಳು ತಾಳು, ಅದೆಲ್ಲಾ ಬೇರೇನೇ ಪ್ಲಾನ್ ಇದೆ’ ಅಂತಂದು ನಗುತ್ತಾ ನಾನು ಫೋನ್ ಇಡುತ್ತೇನೆ. ಈ ಸಂಭಾಷಣೆಯನ್ನು ಕದ್ದಾಲಿಸಿದ ಅಡುಗೆ ಮನೆಯ ಮೂಲೆಯಲ್ಲಿದ್ದ ಒಂದಷ್ಟು ಇರುವೆಗಳು ಎಲ್ಲಿ ತಮಗೆ ಶಿಕ್ಷೆಯಾಗುತ್ತದೋ ಎಂಬ ಭಯಕ್ಕೊಳಗಾದಂತೆ ಚುರುಕಾಗಿ ಓಡಿ ಗೂಡು ಸೇರಿಕೊಳ್ಳುತ್ತವೆ.
[ವಿಶ್ವವಾಣಿ 'ವಿರಾಮ'ದ 'ಮನೆ' ಬಗೆಗಿನ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.]
ನಮ್ಮ ಶಾಲೆಯ ಎರಡನೆಯ ಇಯತ್ತೆಯ ಕನ್ನಡ ಪಠ್ಯದಲ್ಲಿ ‘ನಮ್ಮ ಮನೆ’ ಎಂಬ ಪಾಠವೊಂದಿತ್ತು. ಈ ಪಾಠದಲ್ಲಿ ಇದ್ದ ಮನೆ, ಒಳಾಂಗಣ, ಮನೆಯಲ್ಲಿನ ಪೀಠೋಪಕರಣಗಳು, ಮನೆಯ ಹೊರಗಿನ ವಾತಾವರಣಗಳ ವಿವರಗಳನ್ನೆಲ್ಲ ನಾವು ವಿದ್ಯಾರ್ಥಿಗಳು ನಮ್ನಮ್ಮ ಮನೆಗಳಿಗೆ ಹೋಲಿಸಿ ರೋಮಾಂಚಿತರಾಗುತ್ತಿದ್ದೆವು. ನಮ್ಮ ಮಾಸ್ತರರೂ ಈ ಪಾಠ ಮಾಡಿದ ಮರುದಿನದ ಹೋಂವರ್ಕಾಗಿ ನಮ್ನಮ್ಮ ಮನೆಗಳ ಸ್ವರೂಪವನ್ನು ವಿವರವಾಗಿ ಬರೆದುಕೊಂಡು ಬರುವಂತೆ ಹೇಳಿರುತ್ತಿದ್ದರು. ನಮ್ಮ ಮನೆಯನ್ನು ಕೂಲಂಕುಷವಾಗಿ ನಾವು ನೋಡಿದ್ದೂ ಆಗಲೇ. ಮನೆಗೆ ಎಷ್ಟು ಮೆಟ್ಟಿಲಿದೆ, ಜಗುಲಿಯಲ್ಲಿ ಎಷ್ಟು ಕುರ್ಚಿಯಿದೆ, ಅಡುಗೆಮನೆಯ ನಾಗಂದಿಗೆ ನಮ್ಮ ಕೈಗೆ ಸಿಗದಂತಿದೆ, ಅಪ್ಪ-ಅಮ್ಮ ಮಲಗುವ ಮಂಚದ ಕೆಳಗೇನಿದೆ, ಅಜ್ಜಿಯ ಕೋಲು ಯಾಕೆ ಬಾಗಿಲ ಹಿಂದೇ ಅಡಗಿಕೊಂಡಿರುತ್ತೆ, ನಾಯಿ ಜಾಕಿಯ ಮಲಗುವ ಮೂಲೆಗೆ ಕಟ್ಟಿದ ಸರಪಳಿ ಎಷ್ಟುದ್ದವಿದೆ ಎಂಬೆಲ್ಲ ವಿವರಗಳು ಅದೇ ಮೊದಲ ಸಲ ದಾಖಲಾದವು.
ನಮ್ಮ ಮನೆಯ ಮಾಡು ಸೋಗೆಯಿಂದ ಹೆಂಚಿಗೆ ಬಡ್ತಿ ಪಡೆದ ಕತೆಯನ್ನು ಅಪ್ಪ ಆಗಾಗ ಹೇಳುತ್ತಿದ್ದ. ಅಜ್ಜ ಕಟ್ಟಿಸಿದ್ದ ಮಣ್ಣು ಗೋಡೆಯ ಮನೆಗೆ ಹೆಂಚು ಹೊದಿಸುವ ಮೂಲಕವೇ ತನ್ನ ಅಧಿಕಾರವನ್ನು ಶುರು ಮಾಡಿದ ಅಪ್ಪ, ಆಮೇಲೆ ಆ ಮನೆ ಕೆಡವಿ ಹೊಸ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸಗಾಥೆಯೇ. ಅನೇಕ ಮಳೆಗಾಲಗಳನ್ನು ಕಂಡಿದ್ದ ಆ ನಮ್ಮ ಮನೆಯ ಮಣ್ಣಿನ ಗೋಡೆಗಳನ್ನು ಇಲಿಗಳು ಕೊರೆದು ದೊರಗು ಮಾಡಿದ್ದರೆ, ಬಾಗಿಲು-ಕಿಟಕಿ-ಕಂಬಗಳನ್ನು ವರಲೆ ಹುಳುಗಳು ತಿಂದು ಜೀರ್ಣ ಮಾಡಿದ್ದವು. ಹೆಂಚಿನ ಮಾಡಿಗೆ ಹಾಕಿದ್ದ ಅಡಿಕೆ ದಬ್ಬೆಗಳಂತೂ ಪೂರ್ತಿ ಲಡ್ಡಾಗಿ ಜೋರು ಗಾಳಿಯೋ ಮಳೆಯೋ ಬಂದರೆ ಸೂರೇ ಕಳಚಿ ಬೀಳಬಹುದೆಂಬ ಭಯವೂ ಇತ್ತು. ಮನೆಗೆ ಬಂದ ನೆಂಟರು ಅಕಸ್ಮಾತ್ ಕತ್ತೆತ್ತಿ ಮೇಲೆ ನೋಡಿದರೆ ಬೆಚ್ಚಿ ಬೀಳುವಂತೆ ಮಾಡು ಒಂದು ಕಡೆ ವಾಲಿತ್ತು ಸಹ. ಹೀಗಾಗಿ ಈ ಅಭ್ಯಾಗತರನ್ನು ಭಯಮುಕ್ತಗೊಳಿಸಲು ನಾವು ಬಿಳಿಯ ಸಿಮೆಂಟ್ ಚೀಲಗಳನ್ನು ಹೊಲಿದು ದೊಡ್ಡ ಶೀಟ್ ಮಾಡಿ ಇಡೀ ಮನೆಗೆ ‘ಫಾಲ್ ಸೀಲಿಂಗ್’ ಥರ ಹೊದಿಸಿಬಿಟ್ಟಿದ್ದೆವು. ಜೋರು ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದ ನೀರು ಈ ಫಾಲ್ ಸೀಲಿಂಗ್ ಮೇಲೆ ಶೇಖರಗೊಂಡು ಅಲ್ಲಲ್ಲೇ ಜೋತುಕೊಂಡಿರುತ್ತಿತ್ತು. ಹಾಗೆ ಶೇಖರಗೊಂಡ ನೀರನ್ನು ನಾವು ಅಲ್ಲಲ್ಲೇ ಒಂದು ದಬ್ಬಣ ಹೆಟ್ಟಿ ಕೆಳಗೆ ಬಕೆಟ್ ಹಿಡಿದು ಬಸಿದುಕೊಳ್ಳುತ್ತಿದ್ದೆವು.
ಅಡಿಕೆಗೆ ರೇಟ್ ಬಂದ ಒಂದು ವರ್ಷ ಅಪ್ಪ ಈ ಮನೆ ಕೆಡವಿ ಹೊಸ ಮನೆ ಕಟ್ಟಿಸುವುದಾಗಿ ಘೋಷಿಸಿದ. ಆಟವಾಡುವಾಗ ಮರಳಿನಲ್ಲೋ, ಮಣ್ಣಿನಲ್ಲೋ, ಕೋಲಿನಿಂದಲೋ ಮನೆ ಕಟ್ಟಿಯಷ್ಟೇ ಗೊತ್ತಿದ್ದ ನನಗೆ, ಹೊಸದೊಂದು ವಾಸದ ಮನೆ ಕಟ್ಟಬೇಕು ಎಂದರೆ ಅದಕ್ಕೆ ಎಷ್ಟು ಹಣ ಬೇಕು, ಅಪ್ಪ ಅದನ್ನು ಎಲ್ಲಿಂದ ಹೊಂದಿಸುತ್ತಾನೆ, ಎಷ್ಟು ಪರಿಶ್ರಮ ಬೇಕು –ಎಂಬ್ಯಾವುದರ ಅರಿವೂ ಇರಲಿಲ್ಲವಷ್ಟೇ? ಆದರೆ ಅಪ್ಪನಿಗೆ ಅದು ಹೇಗೆ ಎಲ್ಲಾ ಕೂಡಿ ಬಂತೋ, ಎರಡು ವರ್ಷದೊಳಗೆ ಹೊಸ ಮನೆ ಎದ್ದು ನಿಂತಿತು. ಆ ಮನೆ ಕಟ್ಟುವಷ್ಟು ಕಾಲ ನಾವು ಬಾವಿಮನೆಯ ಪುಟ್ಟ ಜಾಗದಲ್ಲಿ ಇದ್ದುದು. ಹಳೇ ಮನೆ ಕೆಡವುವ ಭಾವಪೂರ್ಣ ಸನ್ನಿವೇಶದಿಂದ ಹೊಸ ಮನೆಗೆ ಒಕ್ಕಲಾಗುವ ಸಂತೋಷದ ಘಳಿಗೆಯವರೆಗೆ ದಿನಗಳು ನೋಡನೋಡುತ್ತ ಕಳೆದವು. ಫೌಂಡೇಶನ್ ಹಾಕುವುದೇನು, ದಿನವೂ ಕ್ಯೂರಿಂಗ್ ಮಾಡುವುದೇನು, ಮರಳು-ಜಲ್ಲಿಗಳ ಲಾರಿಗಳಿಗೆ ಕಾಯುವುದೇನು, ಮಟಗೋಲಿಟ್ಟು ಅಳೆಯುತ್ತ ಇಟ್ಟಿಗೆಗಳನ್ನು ಜೋಡಿಸುವ ಮೇಸ್ತ್ರಿಯ ಕೆಲಸ ನೋಡುವುದೇನು, ಬಂದವರೆಲ್ಲ ಹೊಸಹೊಸ ಐಡಿಯಾ ಕೊಡುವುದೇನು, ವಾಸ್ತು ಪ್ರಕಾರ ಕಟ್ಟಿ ಅಂತ ಹೆದರಿಸುವವರೇನು, ಕಳ್ಳನಾಟಕ್ಕಾಗಿ ರಾತ್ರಿ ಕಾರ್ಯಾಚರಣೆ ನಡೆಸುವುದೇನು, ವಾಸ್ತುಬಾಗಿಲಿಗೆ ಆಚಾರಿ ಹೂಬಳ್ಳಿ ಕೆತ್ತುವಾಗ ಪಕ್ಕ ನಿಂತು ವೀಕ್ಷಿಸುವುದೇನು, ಸ್ಲಾಬ್ ಹಾಕುವ ದಿನ ನೂರಾರು ಕೆಲಸಗಾರರಿಗೆ ಅಡುಗೆ ಮಾಡುವುದೇನು... ಓಹೋಹೋ! ಮೇಸ್ತ್ರಿಗಳು, ಆಚಾರಿಗಳು, ವೈರಿಂಗಿನವರು, ಟೈಲ್ಸ್ ಹಾಕುವವರು, ಪೇಂಟಿಂಗ್ ಮಾಡುವವರು –ಹೀಗೆ ಬೇರೆಬೇರೆ ವಿಭಾಗದ ಹತ್ತಾರು ಜನಗಳ ಜೊತೆಗೆ ಹೆಣಗಾಡುತ್ತ, ಮನೆ ಕಟ್ಟಿ ಮುಗಿಯಿತು ಎಂಬಷ್ಟರಲ್ಲಿ ‘ಮನೆ ಕಟ್ಟಿ ನೋಡು’ ಅನ್ನೋ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬ ಅರಿವು ನಮಗೆಲ್ಲ ಆಗಿತ್ತು. ಅಂತೂ ಅಪ್ಪ ಸಾಧಿಸಿಯೇಬಿಟ್ಟಿದ್ದ. ನೂತನ ಗೃಹಪ್ರವೇಶಕ್ಕೆ ಬಂದವರೆಲ್ಲ ‘ಚನಾಗಿದೆ’, ‘ಸಖತ್ ಪ್ಲಾನ್ ಮಾಡಿ ಕಟ್ಸಿದೀರಿ’, ‘ಎಲ್ಲೂ ಸ್ವಲ್ಪ ಜಾಗಾನೂ ವೇಸ್ಟ್ ಮಾಡಿಲ್ಲ’ ಅಂತೆಲ್ಲ ಹೊಗಳಿ ನಮ್ಮ ಹಿಗ್ಗು ಹೆಚ್ಚಿಸಿದ್ದರು.
ಅಂತೂ ಊರ ಮೊದಲ ಆರ್ಸಿಸಿ ಮನೆಯಾಗಿ ನಮ್ಮ ಮನೆ ಥಳಥಳ ಹೊಳೆಯಿತು. ಹಿಂದೆಯೇ ಕಟ್ಟಲ್ಪಟ್ಟ, ನಮ್ಮ ಮನೆಗಿಂತ ಬೃಹತ್ತಾದ, ಮೆತ್ತು-ಮೇಲ್ಮೆತ್ತುಗಳೂ ಇರುವ, ಆದರೂ ಹಳೇ ಶೈಲಿಯ ಹೆಂಚು ಹೊದಿಸಿದ ನಮ್ಮೂರ ಅನೇಕ ಮನೆಗಳಿಗಿಂತ ನಮ್ಮ ಮನೆಯೇ ಪುಟ್ಟಗೆ ಚೆನ್ನಾಗಿದೆ ಅಂತ ನಮಗೆ ನಾವೇ ಅಂದುಕೊಂಡೆವು. ‘ನಿಮ್ಮನೆ ಹಳ್ಳಿಮನೆ ಥರಾನೇ ಇಲ್ಲ, ಪೇಟೆ ಮನೆ ಇದ್ದಂಗಿದೆ’ ಅಂತ ಯಾರಾದರೂ ಹೇಳಿದರೆ ಅದು ಹೊಗಳಿದ್ದೋ ತೆಗಳಿದ್ದೋ ಗೊತ್ತಾಗದೆ ಒದ್ದಾಡಿದೆವು. ಸಿಮೆಂಟಿನ ಗೋಡೆಗಳಿಗೆ ಕನ್ನ ಕೊರೆಯಲಾಗದೆ ಇಲಿಗಳು ಈಗ ಹಳೆಯ ಕೊಟ್ಟಿಗೆಮನೆ ಸೇರಿದವು. ಪಾಲಿಶ್ ವಾಸನೆಯ ಮರಮಟ್ಟುಗಳು ಗೆದ್ದಲು ಹುಳುಗಳಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಹಳೇಮನೆಯಲ್ಲಿ ಅನೇಕ ಜೀವಿಗಳೊಂದಿಗೆ ಒಂದಾಗಿ ಸಹಜೀವನ ನಡೆಸುತ್ತಿದ್ದ ನಾವು, ಈ ಹೊಸಮನೆಯಲ್ಲಿ ಮನುಷ್ಯರು ಮಾತ್ರ ಜೀವಿಸುವಂತಾಯ್ತು. ನಮ್ಮ ಪುಣ್ಯಕ್ಕೆ ಒಂದೆರಡು ತಿಂಗಳಲ್ಲಿ ಹಲ್ಲಿಗಳೂ, ನೊಣಗಳೂ ಮನೆಯೊಳಗೆ ಸೇರಿಕೊಂಡು ನಮಗೆ ಕಂಪನಿ ಕೊಟ್ಟವು.
‘ದಟ್ಟ ಹಸಿರು-ಅಲ್ಲಲ್ಲಿ ಮನೆ’ ಎಂಬಂತಿರುವ ಹಳ್ಳಿಯಿಂದ, ‘ಎಲ್ಲೆಲ್ಲೂ ಮನೆಗಳು-ಅಲ್ಲಲ್ಲಿ ಹಸಿರು’ ಎಂಬಂತಿರುವ ನಗರಕ್ಕೆ ಬಂದಮೇಲೆ ಮನೆಗಳ ಬಗ್ಗೆ ಇರುವ ನನ್ನ ಕಲ್ಪನೆಯೇ ಬದಲಾಯಿತು. ಮನೆ ಎಂದರೆ ಬರೀ ಕಟ್ಟಡವಲ್ಲ, ಅದೊಂದು ಸಜೀವ ಭಾವಕೋಶ ಎಂದುಕೊಂಡಿದ್ದ ನನ್ನ ಊಹನೆಯನ್ನು ತೊಡೆದುಹಾಕಿದ್ದು ಈ ನಗರ. ಮನೆ ಎಂದರೆ ಕಳೆ ತುಂಬಿದ ಅಂಗಳ, ಜಗುಲಿಯ ಟೇಬಲ್ಲಿನ ಮೇಲಿನ ಕವಳದ ಹರಿವಾಣ, ನಡುಮನೆಯ ಕತ್ತಲು, ಅಡುಗೆಮನೆ ಗ್ಯಾಸ್ಕಟ್ಟೆ ಮೇಲೆ ಕೂತು ಹೇಳಿದ ಕತೆ, ಬೆಡ್ರೂಮಿನ ಮಂಚದ ಕೆಳಗೆ ಪೇರಿಸಿರುವ ಚೀನೀಕಾಯಿ, ಹಿತ್ತಿಲ ಕಟ್ಟೆಯ ಹರಟೆಗೆ ಸಾಥಿಯಾಗುವ ತಂಗಾಳಿ, ಬಾವಿಯ ನೀರಲ್ಲಿ ಪ್ರತಿಫಲಿತ ಗಡಗಡೆಯ ಬಿಂಬ, ಕೊಟ್ಟಿಗೆಯಲ್ಲಿನ ಹೊಸ ಪುಟ್ಟಿಕರುವಿನ ಜಿಗಿತ, ಅಟ್ಟದ ಕಂಬಕ್ಕೆ ಸಿಕ್ಕಿಸಿದ ಕುಡುಗೋಲು ...ಎಂಬೆಲ್ಲ ಚಿತ್ರಗಳನ್ನು ಅಳಿಸಿಹಾಕಿ, ಮನೆ ಎಂದರೆ ಒಂದೋ-ಎರಡೋ-ಮೂರೋ ಬಿಎಚ್ಕೆಗಳಲ್ಲಿ ಅಳೆಯಲ್ಪಡುವ, ಬಾಡಿಗೆಗೆ ಕೊಡಲೆಂದೇ ಕಟ್ಟಿಸಿದ ಬೆಂಕಿಪೊಟ್ಟಣಗಳಂತ ಅಚೇತನ ನಿಕೇತನಗಳು ಎಂಬ ವಿಷಯ ಅರಗಿಸಿಕೊಳ್ಳಲೇ ಕಷ್ಟವಾಗಿತ್ತು.
ಆದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದೇ ಮನುಷ್ಯನ ಸ್ವಭಾವವಲ್ಲವೇ? ಹೀಗಾಗಿ ದುಡಿಮೆಯ ಜಿದ್ದಿಗೆ ಬಿದ್ದು ನಗರ ಸೇರಿದ ನಾನೂ ಈ ಪುಟ್ಪುಟ್ಟ ಮನೆಗಳಲ್ಲೇ ಸೌಂದರ್ಯ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ. ಬಾಡಿಗೆ ಮನೆಗೆಂದು ಬೀದಿಬೀದಿ ಅಲೆಯುವ, ಟು-ಲೆಟ್ ಬೋರ್ಡುಗಳನ್ನು ದೂರದಿಂದಲೇ ಗುರುತಿಸುವ, ರಿಯಲ್ ಎಸ್ಟೇಟ್ ಏಜೆಂಟುಗಳ ಜತೆ ಗುದ್ದಾಡುವ, ಓನರುಗಳ ಜತೆ ವ್ಯವಹರಿಸುವ, ಒಂದು ಮನೆಯಿಂದ ಮತ್ತೊಂದು ಮನೆಗೆ ಆಗಾಗ ಪೆಟ್ಟಿಗೆ ಕಟ್ಟುವ ಜಾಣ್ಮೆ ಬೆಳೆಸಿಕೊಂಡೆ. ಹೀಗೆ ಮನೆಯೊಂದನ್ನು ಪ್ರವೇಶಿಸುವಾಗ ಯಾರೋ ತೊಟ್ಟು ಬಿಟ್ಟ ಬಟ್ಟೆ ತೊಡುತ್ತಿದ್ದೇನೆ ಎನ್ನುವಂತ ಅವಮಾನವೇನೂ ಆಗುತ್ತಿರಲಿಲ್ಲ. ಈ ಮನೆಗಳೂ ಈಗಾಗಲೇ ಯಾರ್ಯಾರೋ ಇದ್ದು ಹೋಗಿದ್ದ ಜಾಗವಿದು ಎಂಬ ಲಕ್ಷಣಗಳನ್ನೆಲ್ಲ ತೊಡೆದುಹಾಕುವಂತೆ ಒಮ್ಮೆ ಬಣ್ಣ ಹೊಡೆಸಿಕೊಂಡು, ಸಣ್ಣ-ಪುಟ್ಟ ರಿಪೇರಿ ಮಾಡಿಸಿಕೊಂಡು ಚಂದ ಪ್ರಸಾದನಕ್ಕೊಳಗಾಗಿ ಹೊಸ ಅತಿಥಿಯನ್ನು ಸ್ವಾಗತಿಸುವವು. ನಗರಕ್ಕೆ ಬ್ಯಾಚುಲರ್ರಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ, ಟೆರೇಸಿನ ಮೇಲಿನ ಒಂಟಿಕೋಣೆಯಿಂದ ಗ್ರೌಂಡ್ ಫ್ಲೋರಿನ ಥ್ರೀ ಬಿಎಚ್ಕೆ ಮನೆಯವರೆಗೆ, ಒಂಟಿಯಿಂದ ಜಂಟಿಯಾಗಿ ಮಕ್ಕಳೊಂದಿಗನಾಗಿ ಸಂಸಾರವನ್ನು ಬೆಳೆಸುತ್ತ ಸದೃಢನಾಗುತ್ತ ಹೋಗುವುದನ್ನು ಈ ನಿರ್ಜೀವ ಕಟ್ಟಡಗಳು ತಮ್ಮ ಸಿಮೆಂಟಿನ ಕಣ್ಣುಗಳಿಂದ ನೋಡುವವು. ಬರೀ ಒಂದು ಚಾಪೆ, ಬಟ್ಟೆಗಂಟು, ನಾಲ್ಕು ಪಾತ್ರೆಗಳೊಂದಿಗೆ ಶುರುವಾಗಿದ್ದ ಅವನ ಜೀವನ, ಬೆಳೆಯುತ್ತ ಬೆಳೆಯುತ್ತ ಒಂದು ಲಾರಿಯಲ್ಲಿ ಹಿಡಿಸಲಾಗದಷ್ಟು ಸಾಮಗ್ರಿಗಳ ಆಗರವಾಗುವುದಕ್ಕೆ ನಗರದ ಮನೆಗಳು ಸಾಕ್ಷಿಯಾಗುವವು.
ಮತ್ತು ಹಾಗೆ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ವರ್ಗವಾಗುತ್ತ ಈಗ ಗ್ರೌಂಡ್ ಫ್ಲೋರಿನ ಮನೆಯಲ್ಲಿರುವ ಈತನ ಮುಂದಿನ ವಾಸ್ತವ್ಯ ‘ಸ್ವಂತ ಮನೆ’ಯಲ್ಲಿ ಎಂಬುದೂ ಸ್ಪಷ್ಟ. ‘ಪ್ರತಿ ಸಲ ಮನೆ ಬದಲಿಸ್ಬೇಕಾದ್ರೂ ಸಾಮಾನು ಸೇರ್ಸೀ ಸೇರ್ಸೀ ಸಾಕಾಯ್ತು ನಂಗೆ.. ಇನ್ನೊಂದ್ ವರ್ಷ ಬಿಟ್ಟು ನೀವು ಮತ್ತೆ ಶಿಫ್ಟ್ ಮಾಡ್ತೀನಿ ಅಂದ್ರೆ ನಾನಂತೂ ಬರಲ್ಲ. ಸ್ವಂತ ಮನೆ ಮಾಡಿ, ಪರ್ಮನೆಂಟಾಗಿ ಒಕ್ಕಲಾಗೋಣ’ ಎಂಬ ಹೆಂಡತಿಯ ಚಿತಾವಣೆಗೆ ಮಣಿದ ಗಂಡ ನಿಧಾನಕ್ಕೆ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಸೇವಿಂಗ್ಸ್ ಇದೆ, ಚೀಟಿ ಹಣ ಎಷ್ಟು ಬರಬಹುದು, ನನ್ನ ಯೋಗ್ಯತೆಗೆ ಎಷ್ಟು ಸಾಲ ಸಿಗಬಹುದು ಎಂಬೆಲ್ಲ ಲೆಕ್ಕಾಚಾರಕ್ಕೆ ಬೀಳುತ್ತಾನೆ. ‘ಈಗೆಲ್ಲಾ ಸೈಟ್ ತಗೊಂಡು ಮನೆ ಕಟ್ಟಿಸಿ ಉದ್ಧಾರ! ಅಲ್ಲದೇ ಸೈಟ್ ಸಿಕ್ಕರೂ ಅದು ನಗರದ ಹೊರಭಾಗದಲ್ಲಿ ಸಿಗೋದು. ಅಲ್ಲಿ ಮನೆ ಕಟ್ಟಿಕೊಂಡು ಅಷ್ಟೆಲ್ಲ ದೂರದ ಆಫೀಸಿಗೆ ಈ ಟ್ರಾಫಿಕ್ಕಲ್ಲಿ ದಿನಾ ಓಡಾಡ್ತೀಯಾ? ಸುಮ್ನೇ ಒಂದು ಫ್ಲಾಟ್ ತಗೋ. ಈ ಬಾಡಿಗೆ ಕಟ್ಟೋ ದುಡ್ಡಲ್ಲೇ ಸಾಲದ ಕಂತು ಕಡ್ಕೊಂಡು ಹೋದ್ರೆ ಆಯ್ತು’ ಎಂಬ ಗೆಳೆಯರ ಸಲಹೆ ಇವನನ್ನು ಯೋಚಿಸುವಂತೆ ಮಾಡುತ್ತದೆ. ನಿಜವಾಗಿಯೂ ಫ್ಲಾಟ್ ಕೊಳ್ಳುವಷ್ಟು ಹಣ, ಆಮೇಲೆ ಆ ಸಾಲ ತೀರಿಸುವಷ್ಟು ಶಕ್ತಿ ತನ್ನಲ್ಲಿದೆಯಾ ಎಂಬ ವಿಶ್ಲೇಷಣೆಗೆ ತೊಡಗುತ್ತಾನೆ. ದಿನವೂ ನ್ಯೂಸ್ಪೇಪರುಗಳಲ್ಲಿ ನೋಡಿ ಉಪೇಕ್ಷಿಸುತ್ತಿದ್ದ ಜಾಹೀರಾತುಗಳೆಡೆಗೆ ಕಣ್ಣು ಹಾಯುತ್ತದೆ. ಯಾರೋ ಎಲ್ಲೋ ಮನೆ ಖರೀದಿಗಿದೆ ಎಂದಾಗ ಕಿವಿ ನೆಟ್ಟಗಾಗುತ್ತದೆ.
ನಗರದ ತುಂಬ ಮಾರಲೆಂದೇ ಕಟ್ಟಿದ ಅಪಾರ್ಟ್ಮೆಂಟುಗಳು, ಬಾಡಿಗೆ ಕೊಡಲೆಂದೇ ಕಟ್ಟಿದ ಮನೆಗಳ ನಡುವಿನ ರಸ್ತೆಯಲ್ಲಿ ನಿರಾಶ್ರಿತ ಉದ್ಯೋಗಾಕಾಂಕ್ಷಿ ಒಂಟಿಯಾಗಿ ನಡೆಯುತ್ತಾನೆ. ಪಾರ್ಕಿನ ಬೆಂಚಿನ ಮೇಲೆ ಕೂತು, ಅಲ್ಲೇ ಪಕ್ಕದ ಮರದ ಮೇಲೆ ಹೊಸ ಗೂಡು ಕಟ್ಟುತ್ತಿರುವ ಹಕ್ಕಿಯೊಂದರ ಚುರುಕು ಕೆಲಸ ನೋಡುತ್ತಾನೆ. ಚಿಲಿಪಿಲಿಗುಟ್ಟಲೂ ಸಮಯವಿಲ್ಲವೆಂಬಂತೆ ಹೊಂಚಿ ತಂದ ಕಡ್ಡಿಗಳನ್ನು ಜೋಡಿಸಿ ಹೊಲಿಯುವಲ್ಲಿ ನಿರತವಾಗಿರುವ ಹಕ್ಕಿ, ಆ ಗಡಿಬಿಡಿಯಲ್ಲೂ ಓರೆಗಣ್ಣಲ್ಲಿ ಇವನೆಡೆಗೆ ನೋಡುತ್ತದೆ. ಆ ನೋಟದಿಂದ, ಚಿಕ್ಕವನಿದ್ದಾಗ ಹಕ್ಕಿ ಹಿಡಿಯಲು ತನ್ನೊಂದಿಗೆ ಕಾಡಿಗೆ ಬರುತ್ತಿದ್ದ ಗೆಳೆಯನ ನೆನಪಾಗುತ್ತದೆ. ಕಳೆದ ಸಲ ಊರಿಗೆ ಬಂದಾಗ ಫೋನ್ ನಂಬರ್ ಕೊಟ್ಟುಹೋಗಿದ್ದು ಹೊಳೆದು, ಪಾಕೀಟಿನಲ್ಲಿ ತಡಕಾಡಿ, ಅಲ್ಲೇ ಕಾಯ್ನ್ ಬೂತಿನಿಂದ ಒಂದು ಫೋನ್ ಮಾಡಿಯೇಬಿಡುತ್ತಾನೆ. ‘ಬಾರೋ ಗೆಳೆಯಾ... ಕೆಲಸ ಸಿಕ್ಕು ಬಾಡಿಗೆ ಮನೆ ತೆಗೆದುಕೊಳ್ಳುವಷ್ಟು ಚೈತನ್ಯ ಬರುವವರೆಗೂ ನಮ್ಮನೆಯಲ್ಲೇ ಇರು. ಸ್ವಲ್ಪಾನೂ ಸಂಕೋಚ ಪಟ್ಕೋಬೇಡ’ ಎಂಬ ಭರವಸೆ ಅತ್ತಲಿಂದ ಸಿಕ್ಕಿದ್ದು ಈತನ ಮುಖಭಾವದಿಂದಲೇ ಗೊತ್ತಾಗುತ್ತದೆ. ಎಲ್ಲ ಹಕ್ಕಿಗಳಿಗೂ ಗೂಡು ಕಲ್ಪಿಸುವ ಈ ನಗರದ ಅಗಾಧತೆ ಮತ್ತು ಇನ್ನೂ ಉಳಿದುಕೊಂಡಿರುವ ಆತ್ಮೀಯತೆಯೆಡೆಗೆ ಬೆರಗಾಗುತ್ತದೆ. ಪಾರ್ಕಿನ ಮರದ ಹಕ್ಕಿಯೆಡೆಗೆ ಕೃತಜ್ಞತೆಯಲ್ಲಿ ಕಣ್ಣು ಮಿಟುಕಿಸುತ್ತಾನೆ.
ನಗರದ ಏಕತಾನತೆ ಎಲ್ಲರಿಗೂ ಈಗ ಬೇಸರ ತಂದಿದೆ. ಮೊನ್ನೆ ಹೆಂಡತಿ ಹೇಳುತ್ತಿದ್ದಳು: ‘ಇನ್ನೊಂದಷ್ಟು ವರ್ಷ ಇಲ್ಲಿದ್ದು ದುಡ್ಡು ಮಾಡಿಕೊಂಡು ಊರಿಗೆ ಹೋಗಿಬಿಡೋಣ. ಹೇಗೂ ನಿಮ್ಮಪ್ಪ ಕಟ್ಟಿಸಿದ ಮನೆ ಗಟ್ಟಿಮುಟ್ಟಾಗಿ ಚೆನ್ನಾಗಿದೆ. ಅದರ ಮೇಲೆ ಇನ್ನೊಂದು ಫ್ಲೋರ್ ಕಟ್ಟಿಸಿ ಮೇಲೆ ಹೆಂಚು ಹೊದಿಸೋಣ. ಮತ್ತೆ ಆರ್ಸಿಸಿ ಬೇಡ. ಹಳ್ಳಿಮನೆ ಅಂದ್ರೆ ಹಳ್ಳಿಮನೆ ಥರಾನೇ ಇರ್ಬೇಕು. ಬೇಕಿದ್ರೆ ಪಕ್ಕದಲ್ಲಿ ಒಂದು ಸೋಗೆಯ ಗುಡಿಸಲು ಕಟ್ಟಿಸಿ ಹೋಮ್ಸ್ಟೇ ಶುರು ಮಾಡೋಣ. ಈಗಂತೂ ಈ ಪೇಟೆ ಮಂದಿಗೆ ಹಸಿರು-ನೀರು-ಮಣ್ಣು ರಸ್ತೆ ಇರೋ ಹಳ್ಳಿಗಳಿಗೆ ಹೋಗಿ ಗುಡಿಸಲುಗಳಂತಹ ಮನೆಯಲ್ಲಿ ಇದ್ದು ವೀಕೆಂಡ್ ಕಳೆದು ಬರೋದು ಶೋಕಿಯಾಗಿಬಿಟ್ಟಿದೆ. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ರೆ ಆಯ್ತು’ ಅಂತ.
ಹತ್ತಾರು ವರ್ಷದ ಹಿಂದೆ, ಊರಿಗೆ ಒಂದೇ ಆರ್ಸಿಸಿ ಮನೆ ಅಂತ ನಾವು ಖುಷಿ ಪಟ್ಟಿದ್ದು ನೆನಪಾಯಿತು. ಈಗ ಊರಲ್ಲೂ ಅನೇಕ ಹೊಸಮನೆಗಳು ಎದ್ದುನಿಂತಿವೆ. ಒಂದೆಡೆ ಆಧುನಿಕತೆಯ ಹೆಸರಲ್ಲಿ ತಳುಕು-ಬಳುಕು ಮೆರೆಯುತ್ತಿದ್ದರೆ, ಇನ್ನೊಂದೆಡೆ ಪುರಾತನಕ್ಕೆ ಮರಳುವ – ಅದೇ ಚಂದ ಎಂದು ಹೇಳುವ ಮನಸುಗಳೂ ಜಾಸ್ತಿಯಾಗುತ್ತಿವೆ. ಗಗನಚುಂಬಿ ಕಟ್ಟಡಗಳು, ಇಟಾಲಿಯನ್ ಸ್ಟೈಲ್ ಕಿಚನ್, ಫಳಫಳ ಗ್ರಾನೈಟ್ ನೆಲಹಾಸು, ಪಿಂಗಾಣಿಯ ಸಿಂಕು, ಬಿಳಿಬಿಳಿ ಬಚ್ಚಲಲ್ಲಿನ್ನ ಬಾತ್ಟಬ್ಬು, ಇತ್ಯಾದಿಗಳ ಮೆರವಣಿಗೆಯ ಜತೆಜತೆಯಲ್ಲೇ, ಹಳ್ಳಿಯ ಸಾದಾಸೀದಾ ಮನೆಗಳು, ಮರದ ಕೆತ್ತನೆ ಕಂಬಗಳು, ಕೆಂಪು ಗಾರೆ ನೆಲ, ಮಾಳಿಗೆಯ ಮುಚ್ಚಿಗೆ, ಬಚ್ಚಲ ಹಂಡೆಯ ನೀರು, ಹಳೆಯ ಪೀಠೋಪಕರಣಗಳಿಂದ ಕೂಡಿದ ತಾವುಗಳೆಡೆಗಿನ ಆಕರ್ಷಣೆ ಹೆಚ್ಚಾಗುತ್ತಿದೆ. ಸರಳತೆಯಲ್ಲೇ ಮನೆಗಳಿಗೊಂದು ಆಪ್ತತೆ ಬರುತ್ತದೆ ಎಂಬ ಭಾವ ಮತ್ತಷ್ಟು ದೃಢವಾಗುತ್ತಿದೆ.
ಅಪ್ಪನಿಗೆ ಫೋನ್ ಮಾಡಿ ಹೆಂಡತಿ ಹೇಳಿದ ವಿಚಾರ ಅರುಹುತ್ತೇನೆ. ‘ಈಗ ಇರೋ ಮನೇನೆ ಗುಡಿಸಿ-ಸಾರಿಸಿ ಮಾಡೋರ್ ಇಲ್ಲ, ಇನ್ನು ಮೇಲೆ ಬೇರೆ ಕಟ್ಟಿಸಿದ್ರೆ ಏನೋ ಗತಿ?’ ಅಂತ ಕೇಳುತ್ತಾನೆ. ‘ತಾಳು ತಾಳು, ಅದೆಲ್ಲಾ ಬೇರೇನೇ ಪ್ಲಾನ್ ಇದೆ’ ಅಂತಂದು ನಗುತ್ತಾ ನಾನು ಫೋನ್ ಇಡುತ್ತೇನೆ. ಈ ಸಂಭಾಷಣೆಯನ್ನು ಕದ್ದಾಲಿಸಿದ ಅಡುಗೆ ಮನೆಯ ಮೂಲೆಯಲ್ಲಿದ್ದ ಒಂದಷ್ಟು ಇರುವೆಗಳು ಎಲ್ಲಿ ತಮಗೆ ಶಿಕ್ಷೆಯಾಗುತ್ತದೋ ಎಂಬ ಭಯಕ್ಕೊಳಗಾದಂತೆ ಚುರುಕಾಗಿ ಓಡಿ ಗೂಡು ಸೇರಿಕೊಳ್ಳುತ್ತವೆ.
[ವಿಶ್ವವಾಣಿ 'ವಿರಾಮ'ದ 'ಮನೆ' ಬಗೆಗಿನ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.]
Friday, April 29, 2016
ಸಂಭ್ರಮಿಸಲೊಂದು ನಿಮಿತ್ತ
ಯಾವಾಗ ಶುರುವಾಯಿತೋ ಬೆಳ್ಳಿಗೆರೆಗಳ ಅಟ್ಟಹಾಸ
ಅಪ್ಪನ ಕೇಶರಾಶಿಯ ನಡುವೆ:
ಈಗ ಕನ್ನಡಿ ಸ್ಟಾಂಡಿನ ಮೇಲೊಂದು ಪುಟ್ಟ ಬೋಗುಣಿ
ಕತ್ತಲ ಕರಗಿಸಿ ಮಾಡಿದ ಕರೀ ಕಣಕ- ಜತೆಗೊಂದು ಕೆದರಿದ ಬ್ರಶ್ಶು.
ಮೊದಮೊದಲು ಅಲಕ್ಷಿಸಿ, ಕೊನೆಗೆ ತುಸುವೇ ಮುತುವರ್ಜಿ ವಹಿಸಿ
ಬಾಗಿಸಿ ವಾಲಿಸಿ ಎತ್ತರಿಸಿ ಕೈಯುದ್ದ ಮಾಡಿ ಸರೀ ಹಿಡಿದು ಕನ್ನಡಿ
ಚೂರ್ಚೂರೆ ನಾಚಿಕೆ, ಚೂರ್ಚೂರೆ ಹಿಂಜರಿಕೆ, ಚೂರ್ಚೂರೆ ಅಂಜಿಕೆ-
ವಯಸು ಮುಚ್ಚಿಡಲು ಮರೆಮಾಚಲು ಮುಂದೂಡಲು ಹರಸಾಹಸ.
ನಿಧಾನಕೆ ಅಮ್ಮನಿಗೂ ವಯಸ್ಸಾದ ಹಾಗೆ ಭಾಸ...
ಮೇಲ್ಮೆತ್ತಿನಲ್ಲಿ ಹಾಗೇ ಬಿಟ್ಟ ಹಳೆಯ ಕುರ್ಚಿಗೆ ಬಿಂದಿಲು ಹಿಡಿದು,
ವರಲೆ ಹುಳುಗಳ ಸುಗ್ರಾಸ ಕೂಳಿಗೆ ಅಷ್ಟಷ್ಟೆ ಕರಗುವ ಕೋಳು.
ಅಪ್ಪ ತೋಟಕ್ಕೆ ಹೋದ ಸಮಯ ನೋಡಿ ಅಮ್ಮನ ಮುಂಗುರುಳು
ಸವರುವ ಕರಿಕುಸುಮಗಳು. ‘ಥೋ ಥೋ, ಸರಿಯಾಗಲ್ಯೇ, ಹಂಗಲ್ದೇ’
-ಅನುನಯದಿಂದಲೇ ಅಮ್ಮನಿಗೆ ಸಹಾಯ ಮಾಡುವ ಅಪ್ಪ.
ಈಗಲೂ ಸಿಗ್ಗಿಗೆ ಕೆಂಪಡರುವ ಅಮ್ಮನ ಮುದ್ದುಮೊಗ.
ಕನ್ನಡಿಗಂತೂ ಭೇದಭಾವವಿಲ್ಲ. ಮೊಸರಲ್ಲಿ ಕಲಸಿ ಚಪ್ಚಪ್ಪೆನಿಸುತ್ತ
ಸವರುತ್ತಿದ್ದಾಳೆ ಹೆಂಡತಿ ನನ್ನದೇ ತಲೆಗೆ ಇಂದು ಮದರಂಗಿ.
ಕೇಳಿದವರಿಗೆ ಕ್ಲೋರಿನ್ ನೀರಿನ ಸ್ನಾನದ ನೆಪ; ಸಿಟಿಲೈಫಿಗೆ ಶಾಪ.
ಬೋರಿಗೆ ಬರುವ ಬೈಕಿನ ಎಂಜಿನ್ನು. ಸವೆಸವೆದೇ ಹರಿದ ಬನಿಯನ್ನು.
ಅಂಚೆ ಕಚೇರಿಯ ಮುಂದಣ ಡಬ್ಬಿಗೆ ತುಕ್ಕು ಹಿಡಿಯದಂತೆ ಕೆಂಪು ಮಾಲೀಶು.
ಇವತ್ತು ಊಟದ ತಟ್ಟೆಯಲ್ಲೊಂದು ಬಿಳಿಗೂದಲು ಸಿಕ್ಕು
ಅಪ್ಪನದೋ, ಅಮ್ಮನದೋ, ನನ್ನದೋ ತಿಳಿಯದೇ ಜೋರು ನಗೆ.
ಮೇಯಲು ಬೆಟ್ಟಕ್ಕೆ ಹೋಗಿ ಎಂದೋ ಕಳೆದುಹೋಗಿದ್ದ ದನವೊಂದು
ಮನೆ ಹುಡುಕಿಕೊಂಡು ಬಂದು ಆಶ್ಚರ್ಯ, ಸಂತೋಷ, ಗೋಗ್ರಾಸ.
ತಳಸಾರಿದ ಬಾವಿಯಲ್ಲಿ ಜಲವೊಡೆದ ಹಾಗೆ ಎಲ್ಲಿಲ್ಲದ ಉಲ್ಲಾಸ.
ಸಂಭ್ರಮಿಸಲೊಂದು ಸಣ್ಣ ನಿಮಿತ್ತ. ಬಣ್ಣ ಬೇಗಡೆಯೆಲ್ಲ ಆಯಾ ಕ್ಷಣದ ಚಿತ್ತ.
* * *
ನನ್ನೀ ಬ್ಲಾಗು ‘ಮೌನಗಾಳ’ ಶುರುವಾಗಿ ಮೊನ್ನೆ 26ಕ್ಕೆ ಹತ್ತು ವರ್ಷ ಸಂದಿತು. ಅಂಬೆಗಾಲಲ್ಲಿ ಪ್ರಾರಂಭವಾದ ಈ ಗೀಚಿನ ನಡಿಗೆ ಕೆಲವೊಮ್ಮೆ ಬಿರುಸಾಗಿ, ಕೆಲವೊಮ್ಮೆ ಕುಂಟುತ್ತ, ಕೆಲವೊಮ್ಮೆ ಓಟವಾಗಿ, ಕೆಲವೊಮ್ಮೆ ಸಮವೇಗವಾಗಿ ಸಾಗಿ, ಒಮ್ಮೊಮ್ಮೆ ಮಾಗಿದಂತೆ ಮತ್ತೊಮ್ಮೆ ಮಾಸಿದಂತೆ ಎನಿಸಿ, ಆಗಾಗ ಬಣ್ಣ ಬೇಗಡೆ ಹಚ್ಚಿಕೊಂಡು ಅಲ್ಲೇ ಚಿಗುರಿ ಮೈತಳೆದು ಹೊಳೆದು ಬೆಳೆದು ಮತ್ಮತ್ತೆ ಸೊರಗಿ ಮತ್ಮತ್ತೆ ಎದ್ದು ನನಗೆ ಖುಷಿ ಕೊಡುತ್ತಾ ಮುಂದುವರೆದಿದೆ. ಈ ಪಯಣದಲಿ ಜತೆಗಾರರಾದ ನಿಮಗೆಲ್ಲಾ ಆಭಾರಿಯೆನ್ನುತ್ತಾ...
Friday, April 15, 2016
ರಾಮಭಕ್ತ ತುಳಸೀದಾಸ
ಯಮುನಾ ನದಿ ತುಂಬಿ ಹರಿಯುತ್ತಿತ್ತು. ರಾಂಬೋಲ
ಹಿಂದೆಮುಂದೆ ಸಹ ನೋಡದೆ ಅದರಲ್ಲಿ ಧುಮುಕಿದ. ಆಚೆ ದಡ ತಲುಪಿ ಹೆಂಡತಿ ರತ್ನಾವತಿಯನ್ನು ಕಾಣುವ
ತವಕದಲ್ಲಿ ತೆರೆಗಳನ್ನು ತೆತ್ತೈಸುತ್ತ ಈಜಿದ. ಆದರೆ ಅಷ್ಟೆಲ್ಲ ಧಾವಂತದಲ್ಲಿ ಬಂದ ಗಂಡನಿಗೆ
ರತ್ನಾವತಿ, “ನಿನಗೆ ನನ್ನ
ಬಗೆಗಿರುವಷ್ಟೇ ಆರಾಧನೆ ದೇವರ ಬಗೆಗೆ ಇದ್ದಿದ್ದರೆ ಇಷ್ಟೊತ್ತಿಗೆ ಮಹಾಸಾಧಕನಾಗಿರುತ್ತಿದ್ದೆ” ಎಂದುಬಿಟ್ಟಳು. ಅಷ್ಟೇ: ರಾಂಬೋಲ ಮತ್ತೆ ಸಂಸಾರದತ್ತ ತಿರುಗಿ ನೋಡಲಿಲ್ಲ. ಸಂತನಾದ.
ತುಳಸೀದಾಸನಾದ.
ತುಳಸಿದಾಸರು ಹುಟ್ಟಿದ್ದು ಈಗಿನ ಉತ್ತರ
ಪ್ರದೇಶದಲ್ಲಿರುವ ಚಿತ್ರಕೂಟದಲ್ಲಿ. ರಾಂಬೋಲನೆಂಬುದು ಅವರ ಹುಟ್ಟುಹೆಸರು. ವಾಲ್ಮೀಕಿಯ ಅಪರಾವತಾರವೆಂದೇ ಕರೆಯಲ್ಪಡುವ ಅವರು, ವೈರಾಗ್ಯ ದೀಕ್ಷೆ ಹೊತ್ತ ನಂತರ, ಗುರು ನರಹರಿದಾಸ
ಮತ್ತು ಶೇಷ ಸನಾತನರ ಮೂಲಕ, ಸಂಸ್ಕೃತವನ್ನೂ, ವೇದ-ವೇದಾಂಗಗಳನ್ನೂ, ಜ್ಯೋತಿಷ್ಯವನ್ನೂ, ಮೂಲ ರಾಮಾಯಣವನ್ನೂ, ಹಿಂದೂ ಸಂಸ್ಕೃತಿಯನ್ನೂ ಅಧ್ಯಯನ ಮಾಡಿದರು. ಚಿತ್ರಕೂಟದ ತಮ್ಮ ಮನೆಯ ಬಳಿ ರಾಮಾಯಣದ ಕಥೆಯನ್ನು ಹೇಳುತ್ತಾ ಬಹುಕಾಲ ಕಳೆದರು.
ನಂತರ ಅವರು ವಾರಣಾಸಿ, ಪ್ರಯಾಗ, ಅಯೋಧ್ಯೆ, ಬದರಿ, ದ್ವಾರಕೆ, ರಾಮೇಶ್ವರ, ಮಾನಸ ಸರೋವರ
...ಹೀಗೆ ದೇಶಾದ್ಯಂತ ಯಾತ್ರೆ ಕೈಗೊಂಡರು. ತಂಗಿದೆಡೆಯೆಲ್ಲ ರಾಮಾಯಣದ ಕಥೆ ಹೇಳುವರು. ತಮ್ಮ
ಕೃತಿಗಳಲ್ಲಿ ತುಳಸೀದಾಸರು ಹೇಳಿಕೊಳ್ಳುವಂತೆ, ವಾರಣಾಸಿಯಲ್ಲಿ ಅವರು
ಪಾರಾಯಣ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಪ್ರತಿದಿನವೂ ತಮ್ಮ ಪಾರಾಯಣ ಕೇಳಲು ಮೊಟ್ಟಮೊದಲು ಬಂದು
ಕೂತು, ಕಟ್ಟಕಡೆಯಲ್ಲಿ ತೆರಳುವುದನ್ನು ಗಮನಿಸಿದರು. ಒಂದು ದಿನ ಅವನನ್ನು
ಹಿಂಬಾಲಿಸಿದರು. ಆತ ಕಾಡಿನೆಡೆಗೆ ತೆರಳುತ್ತಿರುವುದನ್ನು ಕಂಡು ಇವರ ಅನುಮಾನ ಬಲವಾಯಿತು. ಅವನ
ಕಾಲು ಹಿಡಿದು ತನ್ನ ನಿಜರೂಪ ತೋರಿಸುವಂತೆ ಬೇಡಿಕೊಂಡರು. ತುಳಿಸೀದಾಸರ ಅನುಮಾನದಂತೆ ಆತ
ಸಾಕ್ಷಾತ್ ಹನುಮಂತನಾಗಿದ್ದ. ತುಳಸೀದಾಸರು ತನಗೆ
ರಾಮನ ದರ್ಶನ ಮಾಡಿಸುವಂತೆ ಹನುಮನಲ್ಲಿ ಬೇಡಿಕೊಂಡರು. ಆಗ ಹನುಮ ತುಳಸೀದಾಸರಿಗೆ ವಾಪಸು ಚಿತ್ರಕೂಟಕ್ಕೆ
ತೆರಳುವಂತೆ ಸೂಚಿಸುತ್ತಾನೆ. ಅಲ್ಲಿ ತುಳಸೀದಾಸರಿಗೆ ರಾಮ ಒಂದು ಮಗುವಿನ ರೂಪದಲ್ಲಿ
ದರ್ಶನವೀಯುತ್ತಾನೆ. ನಂತರ ಪ್ರಯಾಗದಲ್ಲಿ ತುಳಸಿಗೆ ಯಾಜ್ನವಲ್ಕ್ಯರ, ಭಾರದ್ವಾಜ ಮುನಿಗಳ ಸಂದರ್ಶನವೂ ಆಗುತ್ತದೆ.
ತುಳಸೀದಾಸರು ಸುಪ್ರಸಿದ್ಧ ‘ರಾಮಚರಿತಮಾನಸ’ವನ್ನು ಬರೆಯಲು ಪ್ರಾರಂಭಿಸಿದ್ದು 1631ರ ವಿಕ್ರಮ ಸಂವತ್ಸರದ
ರಾಮನವಮಿಯಂದು. ಭಾರತ ಆಗ ಮೊಘಲರ ಆಳ್ವಿಕೆಯಲ್ಲಿತ್ತು. ಸುಮಾರು ಎರಡೂವರೆ ವರ್ಷದ ಅವಧಿಯಲ್ಲಿ
ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟಗಳಲ್ಲಿ ರಾಮಚರಿತಮಾನಸ ರಚಿಸಲ್ಪಟ್ಟಿತು. ತುಳಸೀದಾಸರು
ಸಂಸ್ಕೃತದಲ್ಲಿ ಪಾರಂಗತರಾಗಿದ್ದರೂ, ರಾಮಚರಿತಮಾನಸವನ್ನು
ಅವರು ‘ಅವಧಿ’ ಎಂಬ ಪೂರ್ವಭಾರತದ
ಜನರ ಆಡುಭಾಷೆಯಲ್ಲಿ (ಹಿಂದಿಯ ಪ್ರಾದೇಶಿಕ ಭಾಷೆ) ಬರೆದರು. ಇದರಿಂದಾಗಿ ಆಗಿನ ಕಾಲದ ಸಂಸ್ಕೃತ
ವಿದ್ವಾಂಸರ ಟೀಕೆಗೂ ಗುರಿಯಾಗಿದ್ದರು. ಆದರೆ
ತುಳಸೀದಾಸರ ಬಯಕೆ ಪುಣ್ಯಕಥೆ ರಾಮಾಯಣವನ್ನು ಅತಿಸಾಮಾನ್ಯ ಮನುಷ್ಯನಿಗೂ ತಲುಪಿಸುವುದಾಗಿತ್ತು. ಹೀಗಾಗಿ
ಅವರು ತಮ್ಮ ನಿಲುವಿಗೆ ನಿಷ್ಠರಾಗಿ ಕಾವ್ಯರಚನೆ ಮುಂದುವರೆಸಿದರು. ಏಳು ಕಾಂಡಗಳಲ್ಲಿ
ರಚಿಸಲ್ಪಟ್ಟಿರುವ, ವಾಲ್ಮೀಕಿ ರಾಮಾಯಣದ ಅವತರಿಣಿಕೆಯಾಗಿರುವ ರಾಮಚರಿತಮಾನಸದ
ವಿಶೇಷತೆಯೆಂದರೆ, ಪ್ರತಿ ಸಾಲಿನಲ್ಲೂ ‘ಸ’, ‘ತ’, ‘ರ’ ಅಥವಾ ‘ಮ’ ಅಕ್ಷರ ಇದ್ದೇ ಇದೆ. ತನ್ಮೂಲಕ ತುಳಸೀದಾಸರು ತಮ್ಮ ಪ್ರಾಣದೇವರಾದ ‘ಸೀತಾರಾಮ’ರು ಪ್ರತಿ ಸಾಲಿನಲ್ಲೂ ಇರುವಂತೆ ನೋಡಿಕೊಂಡಿದ್ದಾರೆ. ಮೂರೂವರೆ ಶತಮಾನದ ಹಿಂದೆ ಬರೆಯಲ್ಪಟ್ಟಿದ್ದರೂ ಸಹ ಇವತ್ತಿಗೂ
ಅದು ಭಾರತೀಯ ಕಾವ್ಯ ಪರಂಪರೆಯ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಡುತ್ತದೆ. ಇವತ್ತಿಗೂ
ಲಕ್ಷಾಂತರ ರಾಮಭಕ್ತರಿಂದ ಹಾಡಲ್ಪಡುತ್ತದೆ.
ರಾಮಚರಿತಮಾನಸವಲ್ಲದೇ, ಬದುಕನ್ನೂ-ಜಗವನ್ನೂ ಎರಡೆರಡೇ ಸಾಲುಗಳಲ್ಲಿ ಕಟ್ಟಿಕೊಡುವ ಐನೂರಕ್ಕೂ ಹೆಚ್ಚು ದೋಹಾಗಳನ್ನೂ, ಭಗವಾನ್ ಕೃಷ್ಣನೆಡೆಗಿನ ಭಕ್ತಿಗೀತೆಗಳನ್ನೂ ತುಳಸಿ ರಚಿಸಿದರು. ಅವರ ರಾಮಸ್ತುತಿ ‘ಗೀತಾವಲಿ’ ಹಿಂದೂಸ್ತಾನೀ ಗಾಯಕರ ಅಚ್ಚುಮೆಚ್ಚು. ಅವರ ‘ವಿನಯಪತ್ರಿಕಾ’, ಷಡ್ವೈರಿಗಳಿಂದ ಕೂಡಿದ ಕಲಿಯುಗದ ಭಕ್ತನೊಬ್ಬ ರಾಮನ ಆಸ್ಥಾನದಲ್ಲಿ
ನಿಂತು ಅಹವಾಲು ಸಲ್ಲಿಸುವ ರೀತಿಯಲ್ಲಿರುವ ಅತ್ಯುತ್ಕೃಷ್ಟ ಕಾವ್ಯ. ಅದು ಪ್ರಪಂಚದ ಹಲವು
ಭಾಷೆಗಳಿಗೆ ಅನುವಾದವಾಗಿದೆ. ‘ಹನುಮಾನ್ ಚಾಲೀಸಾ’ವಂತೂ ಪ್ರತಿಮನೆಯ
ಭಜನೆಯಾಗಿರುವುದು ಸತ್ಯ.
ಹದಿನಾರನೇ ಶತಮಾನದಲ್ಲಿ ಬಾಳಿದ್ದ ತುಳಸೀದಾಸರು
ಅವರ ಕಾಲಾನಂತರವೂ ಉಳಿದಿರುವುದು ಅವರ ಕಾವ್ಯದ ಮೂಲಕ. ಅವರ ಪ್ರತಿ ರಚನೆಯಲ್ಲೂ ರಾಮಭಕ್ತಿ ಎದ್ದು
ಕಾಣುತ್ತದೆ. ರಾಮಾಯಣವನ್ನು ತಮ್ಮ ಪ್ರವಚನಗಳ ಮೂಲಕ, ಬರಹದ ಮೂಲಕ
ಜನಮಾನಸಕ್ಕೆ ತಲುಪಿಸಿದ ಕೀರ್ತಿ ತುಳಸೀದಾಸರದ್ದು. ಅವರು ನಮ್ಮ ದೇಶ ಕಂಡ ಅತ್ಯುತ್ತಮ ಕವಿಗಳಲ್ಲಿ
ಒಬ್ಬರಾಗಿ ಇಂದಿಗೂ ಪ್ರಸ್ತುತ.
['ಧರ್ಮಭಾರತೀ' ಪತ್ರಿಕೆಗಾಗಿ ಬರೆದದ್ದು.]
Thursday, March 31, 2016
ಹೋಳಿಯ ಮರುದಿನ
ಹೋಳಿಹಬ್ಬದ ಮರುದಿನ ಎಲ್ಲೆಂದರಲ್ಲಿ ಕಾಮನಬಿಲ್ಲು
ಜೋಡುರಸ್ತೆಯಲ್ಲಿ, ಸಣ್ಣ ಗಲ್ಲಿಯಲ್ಲಿ, ಕಾರಿಡಾರಿನಲ್ಲಿ,
ಮರದ ಬುಡದಲ್ಲಿ, ಉದ್ಯಾನದ ಬೆಂಚಿನಲ್ಲಿ, ಚಪ್ಪಲಿ ಸ್ಟಾಂಡಿನಲ್ಲಿ
ಚೆಲ್ಲಿದ ಬಣ್ಣ. ಮುಂಜಾನೆ ಮಬ್ಬಲ್ಲಿ ಕಣ್ಣುಜ್ಜುತ್ತಲೇ
ಬಾಗಿಲು ತೆರೆದರೆ
ಹೂಕುಂಡದ ಪುಟ್ಟಗಿಡದಲ್ಲೊಂದು ಕೆಂಪುಹೂ.
ಬಚ್ಚಲ ಪೈಪಿನಿಂದ ಧಾರಾಕಾರ ಹೊರಹರಿವ ಬಣ್ಣನೀರು;
ಮುಖ ತೊಳೆದಷ್ಟೂ ತೆರೆಯುತ್ತ ಹೋಗುವ ಹೊಸ ಪದರಗಳು;
ತಲೆಗೂದಲ ಸಿಕ್ಕುಗಳಲಿ ಶಾಂಪೂಗಂತೂ ಸಿಕ್ಕಾಪಟ್ಟೆ
ಕೆಲಸ;
ಬಿಳಿಯಂಗಿ ಇನ್ನು ಬಳಸಲಾಗದಂತಾದುದಕ್ಕೆ ಒಳಗೇ ಬೇಗುದಿ;
ವಿವರ್ಣವಿಶ್ವಕ್ಕೆ ಹೊಂದಿಕೊಳ್ಳಲು ಅಂದಿಡೀ ಕಷ್ಟ
ಪಡುವ ಕಣ್ಣು.
ಆ ರಾತ್ರಿ ಬಹುಳದ ಚಂದ್ರ ಬೆಳ್ಳಗೇ ಏಳುವನು.
ತಾರಸಿಯ ಮೌನದಲ್ಲಿ ಕಾಲಿಡುವಾಗ ಕೌಮುದಿ ಕೇಳುವುದು:
ಬಳಿಸಿಕೊಂಡ ಬಣ್ಣ ಬಲು ಸುಲಭದಲ್ಲಳಿಸುವುದು.
ಬಳಿದುಕೊಂಡ ಬಣ್ಣ ಕಳಚುವುದು ಹೇಗೆ?
ತಂತಿಯಲ್ಲೊಣಗುತ್ತಿರುವ ಅಂಗಿ, ತೊಳೆದ ಅಂಗಳದ ಒದ್ದೆನೆಲ,
ಗೋಡೆಯಲ್ಲಿ ಚಟ್ಟು ಹೊಯ್ದ ಅವಳ ಕೈಯಚ್ಚು
ಎಂದೋ ಬಂದಿದ್ದ ಆಪ್ತಮಿತ್ರನ ಪತ್ರ
ಜಾನಪದ ಸಿರಿಯಜ್ಜಿಯ ಹಾಡಿನಲ್ಲಿನ ಮುಗ್ಧತೆ
ಎಲ್ಲವೂ ಸೇರಿಸುತ್ತಿವೆ ಬೆಳದಿಂಗಳೊಂದಿಗೆ ತಮ್ಮ ದನಿ.
ಪಿಚಕಾರಿಯಲ್ಲುಳಿದ ಓಕುಳಿ ಕುಲುಕದೇ ಕಾಯುತ್ತಿದೆ
ಉತ್ತರಕ್ಕೆ.
ತತ್ತರಿಸುತ್ತೇನೆ ಈ ದಾಳಿಗೆ. ಕೆಳಗೋಡಿ ತಿಕ್ಕಿತಿಕ್ಕಿ
ತೊಳೆಯುತ್ತೇನೆ ಮೊಕ. ಶವರಿನಡಿ ಕೊನೆಯಿಲ್ಲದಂತ
ಭರ್ಜರಿ ಅಭ್ಯಂಜನ. ಬುರುಬುರು ಬರುವ ಬುರುಗು.
ಬಚ್ಚಲ ತುಂಬ ಸಾಬೂನಿನ ಘಮಘಮ ಪರಿಮಳ.
ಓಹೋ ಸ್ವಚ್ಛವಾದೆನೇ ಬಣ್ಣವೆಲ್ಲ ಕರಗಿತೇ ನಿರಭ್ರನಾದೆನೇ
-ಎಂದು ಮತ್ತೆಮತ್ತೆ ನೀರೆರೆದುಕೊಂಡು ಬಿಳಿಯ ಟವೆಲಿನಲ್ಲಿ
ಮೈಯೊರೆಸಿಕೊಂಡು ಶುಭ್ರ ಹೊಸಬಟ್ಟೆ ಧರಿಸಿ...
ಮೂರ್ನಾಲ್ಕು ದಿನಗಳಲ್ಲಿ ನಗರ ತನ್ನ ಕಾಲುದಾರಿ,
ಕಟ್ಟಡ ಸೋಪಾನ, ಮರದಿಂದೆದ್ದುಬಂದ ಬೇರು,
ಎಷ್ಟೋ ದಿನದಿಂದ ಅಲ್ಲೇ ನಿಂತಿರುವ ವಾಹನ,
ಮುಚ್ಚಿದಂಗಡಿಯ ಶಟರಿಗೆ ಹಾಕಿದ ಬೀಗ-ಗಳಿಗೆ
ಮೆತ್ತಿದ ಬಣ್ಣವನ್ನೆಲ್ಲ ನಿವಾರಿಸಿಕೊಂಡು ಸರಳ ಸುಂದರ
ನಿತ್ಯನಿರ್ಮಲ ಯೋಗಮುದ್ರೆ ಧರಿಸಿ ನಿಂತಿದೆ.
ನನ್ನ ಕಿವಿಯಲ್ಲಿ ಮಾತ್ರ ಇನ್ನೂ ಸ್ವಲ್ಪ ಬಣ್ಣ ಉಳಿದಿರುವ
ಶಂಕೆ.
Subscribe to:
Posts (Atom)