Monday, March 17, 2008

ಪ್ರಣತಿಯ ಖುಷಿಗೊಂದು ಬ್ಲಾಗರ್ಸ್ ಮೀಟ್

ಮತ್ತೊಂದು ಖುಷಿಯ ದಿನ ನಿನ್ನೆ. ತಿಂಗಳಿಂದ ಪಟ್ಟಿದ್ದ ಶ್ರಮ ಸಾರ್ಥಕವಾಯ್ತು. ವಾರದಿಂದ ಮಾಡಿಕೊಂಡಿದ್ದ ಟೆನ್ಷನ್ನೆಲ್ಲ ಕಳೆದು ಒಂದು ಸುಧೀರ್ಘ ನಿಟ್ಟುಸಿರು ಬಿಡುವಂತಾಯ್ತು.

ನೂರಿಪ್ಪತ್ತಕ್ಕೂ ಹೆಚ್ಚು ಬ್ಲಾಗಿಗರಿಂದ, ಓದುಗರಿಂದ, ಸಾಹಿತ್ಯಪ್ರೇಮಿಗಳಿಂದ, ಕನ್ನಡಿಗರಿಂದ ತುಂಬಿ ತುಳುಕುತ್ತಿತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಸಭಾಂಗಣ. ನಮ್ಮೆಲ್ಲರ ಪ್ರೀತಿಯ ಪವನಜ, ನಾಡಿಗ್, ರಶೀದ್, ಶ್ಯಾಮ್ ತುಂಬಾ ಚೆನ್ನಾಗಿ ಮಾತಾಡಿದ್ರು. ನಂತರ ನಡೆದ ಚರ್ಚೆ ಸಹ ಫಲಪ್ರದವಾಗಿತ್ತು. ಚಹ, ಹವೆಗೆ ತಕ್ಕಷ್ಟೇ ಬಿಸಿ ಇತ್ತು. ಯಾರ್ಯಾರೆಲ್ಲ ಬಂದಿದ್ರು, ಎಷ್ಟೆಷ್ಟು 'ಹಾಯ್'ಗಳು ವಿನಿಮಯವಾದ್ವು, ಎಷ್ಟು ಜನ ಎಷ್ಟು ಜನರ ಕೈ ಕುಲುಕಿದ್ರು, ಆಹ್! ಒಂದು ಯಶಸ್ವೀ ಕಾರ್ಯಕ್ರಮ ಕೊಟ್ಟ ಸಂಭ್ರಮದಲ್ಲಿ ಪ್ರಣತಿ, ನೋಡಿ, ಹೇಗೆ ನರ್ತಿಸುತ್ತಾ ಬೆಳಗುತ್ತಿದೆ..!

ಬಂದವರಿಗೆ, ಬರಕ್ಕಾಗಲ್ಲ ಅಂತ ಎಲ್ಲೆಲ್ಲಿಂದಲೋ ವಿಶ್ ಮಾಡಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್.

ದಟ್ಸ್ ಕನ್ನಡದಲ್ಲಿ ವರದಿ
ಕೆಂಡಸಂಪಿಗೆಯಲ್ಲಿ ವರದಿ

Monday, March 10, 2008

ಆ ಸಂಜೆ, ನಾವೆಲ್ಲ ಸೇರ್ತಿದೀವಿ...

ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇನೆ: ನನ್ನ ಸ್ನೇಹಿತರ ಸಂಖ್ಯೆ ಹೆಚ್ಚಾಗಿದ್ದು ಇಂಟರ್ನೆಟ್ಟಿನ ಕೃಪೆಯಿಂದ! ನಾನೇನಾದರೂ 'ನೆಟ್ಟಿಗ'ನಾಗದೇ ಉಳಿದಿದ್ದರೆ ಅದೆಷ್ಟು ಚಿಕ್ಕ ಲೋಕದಲ್ಲಿರುತ್ತಿದ್ದೆನೋ ಎಂದು ಯೋಚಿಸಿದಾಗ ದಿಗ್ಭ್ರಾಂತಿಯೂ ಜತೆಗೇ ಹಿತಾನುಭವವೂ ಆಗುತ್ತದೆ. ಎಲ್ಲೋ ಯಾರೋ ತೋರಿಸಿಕೊಟ್ಟರು: ಜಿ-ಮೇಲು ಅಂತ ಬಂದಿದೆ ನೋಡು.. ಚನಾಗಿದೆ.. ಒಂದು ಅಕೌಂಟ್ ಕ್ರಿಯೇಟ್ ಮಾಡ್ಕೋ, ನಾನು ಇನ್ವಿಟೇಶನ್ ಕಳುಹಿಸ್ತೀನಿ ಅಂತ.. ಜಿ-ಮೇಲಿನಿಂದ ಆರ್ಕುಟ್ಟು, ಅದಾದಮೇಲೆ ಬ್ಲಾಗು ಎಲ್ಲಾ ಗೊತ್ತಾಯ್ತು.. ತೆರೆದದ್ದಾಯ್ತು, ಬರೆದದ್ದಾಯ್ತು.. ಯಾರ್ಯಾರೋ ನಾನು ಬರೆದದ್ದನ್ನೆಲ್ಲ ಓದಿ, ಕಂಡು ಕೇಳರಿಯದ ಲೋಕಗಳಿಂದೆಲ್ಲ ಫ್ರೆಂಡ್ ರಿಕ್ವೆಸ್ಟುಗಳು ಬರತೊಡಗಿದವಲ್ಲ..? ಯಾರ್ಯಾರೋ ನನಗೆ ಫ್ಯಾನಂತೆ, ಯಾರಿಗೋ ನನ್ನ ಮೇಲೆ ಕ್ರಶ್ಶಂತೆ... ಆಹ್! ಇದೇನಾಗಿ ಹೋದೆ ನಾನು ಅಂತ ನನಗೇ ಒಮ್ಮೊಮ್ಮೆ ಯೋಚನೆಯಾಗುತ್ತದೆ!

ಇಂಟರ್ನೆಟ್ಟಿನಲ್ಲೇ ಎಷ್ಟೊಂದು ಮಂದಿ ಪರಿಚಯವಾಯ್ತು.. ಸಿಕ್ಕ ಅಕ್ಕಂದಿರು, ಪ್ರೀತಿ ತಂಗಿಯರು, 'ಏಕವಚನದಲ್ಲಿ ಕರೆಯೋ' ಎಂದವರು, ಹೆಸರೇ ಹೇಳದೇ ಕಾಡಿದವರು, ಸುಳ್ಳೇ 'ನೀನಿಷ್ಟ' ಎಂದವರು... ಓಹ್! ಇಂಟರ್ನೆಟ್ಟಿನಲ್ಲೇ ಪ್ರೀತಿ, ಪ್ರಪೋಸಲ್ಲು, ಮೋಸ, ವಿರಹ, ಜಗಳ, ಶಾಪ, ದ್ವೇಷ, ಹಪಹಪಿ... ಎಲ್ಲವನ್ನೂ ನೋಡಿದ್ದಾಯ್ತು. ಏನೆಲ್ಲ ಮಾಡಿದ್ದಾಯ್ತು.

ಬರೆದದ್ದನ್ನೆಲ್ಲ ಸುಮ್ಮನೆ ಮುಚ್ಚಿ ಬಚ್ಚಿಡುತ್ತಿದ್ದ ನನ್ನಂಥವರಿಗೆ ಬ್ಲಾಗುಗಳು ತೆರೆದಿಟ್ಟ ಲೋಕ ನಿಜಕ್ಕೂ 'ಕೃತಜ್ಞತಾವರ್ತ್'. ಆದರೆ ಹೀಗೆ ಬರೆದುಕೊಳ್ಳುತ್ತಿರುವ ನಾವು, ನಮ್ಮಲ್ಲೆಷ್ಟೋ ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನಮ್ಮ ಪುಸ್ತಕ 'ಚಿತ್ರಚಾಪ'ವನ್ನ ಪ್ರಕಟಿಸಿತ್ತಲ್ಲ, 'ಪ್ರಣತಿ ಪ್ರಕಾಶನ', ಹಾಂ ಅದು, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, 'ವಿಶ್ವಕನ್ನಡ'ದ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಪ್ರೀತಿಯಿಂದ,

-ಸು

Friday, February 29, 2008

ಸಾಗರದ ಜಾತ್ರೆಯಲಿ...

ಸಾಗರದ ಜಾತ್ರೆಯಲಿ ಸಾಗರದಷ್ಟು ಜನ
ತಿರುಗುವ ತೊಟ್ಟಿಲು, ಬಳೆಯಂಗಡಿ, ಬತ್ತಾಸು ಬೆಂಡು
ಖಾರಾ ಮಂಡಕ್ಕಿ, ಪೀಪಳಿ ಶಬ್ದ, ಬಾವಿಯೊಳಗೆ ಬೈಕು
ಪ್ರತಿದಿನವು ತೆರಳುವಿವನು.

ಇಂದು ನಾಲ್ಕನೆಯ ದಿನ, ಇಂದೆಂದಿನಂತಲ್ಲ:
ಮಾರಮ್ಮನಾ ಕಣ್ಗೆಂಪು ತುಸು ಹೆಚ್ಚೆ ಇಹುದು;
ಆ ರೌದ್ರ ಭಯಬಣ್ಣ ಹಸಿರಾಗಲಿಹುದು:
ಇನ್ನೇನು ಬರಲಿಹಳು ಮಾವನಾ ಮಗಳು.

ನಿನ್ನೆ ಮುಸ್ಸಂಜೆಯೇ ಬಂದಿತ್ತು ದೂರವಾಣಿಯ ಕರೆ:
ಮುಂಜಾನೆ ಬಸ್ಸಿಗೆ ಬರುತಿಹಳು ಎಂದು;
'ಭಾವನೆಂದರೆ ಸಾಕು, ಅದೇನು ಪ್ರೀತಿಯೋ ಕಾಣೆ
ಗರಿಗೆದರಿ ಆಗುವಳು ತಾನೆ ನವಿಲು' -ಎಂದಿದ್ದರು ಅತ್ತೆ!

ಮೊದಲ ಬಸ್ಸಿದೋ ಬಂತು, ನೂಕು ನುಗ್ಗಲು, ಛೇ!
ಮುದುಡಿ ಹೋಗಿಹಳೋ ಏನೋ ನನ್ನ ನಲ್ಲೆ?
ಇಳಿದರೂ ಇಷ್ಟು ಜನ, ತೋರುತಿಲ್ಲವೇಕವಳ ಮುಖ
ತಪ್ಪಿಸಿಕೊಂಡಳೇ ಮೊದಲ ಗಾಡಿ ತಡವಾಗಿ ಹೊರಟು?

ಇಲ್ಲ ಇಲ್ಲ ಇಲ್ಲ, ಅಲ್ಲಿ ನೋಡಿ ಅಲ್ಲಿ:
ಸಿರಿಗಂಗೆ ಇಳಿದಂತೆ ಜರತಾರಿ ಉಟ್ಟು
ಮೆಟ್ಟಿಲಲ್ಲೇ ನಿಂತು ಅರಸುತಿರುವಳು ಎನಗೆ
'ಇಲ್ಲಿ ಇರುವೆನು ಏ, ಹೀಗೆ ಬಾರೇ.'

ತೇರದಾರಿಯಲಿರುವ ಅಂಗಡಿಗಳೆಲ್ಲ
ತಮಗಾಗಿಯೇ ತೆರೆದಿಹವು ಎನ್ನುವಂತೆ;
ನೋಡುತಿರುವವು ಇವಳ ಮಿಟುಕಿಸದ ಕಣ್ಣು
ಇದ ನೋಡುವುದರಲ್ಲೇ ನಿರತ ನನ್ನ ಕಣ್ಣು!

ಅಮ್ಮನಾ ಗುಡಿಯೆದುರು ಉದ್ದ ಜನ ಸಾಲು
ಮೆಲ್ಲ ಕರಗುವ ಮಂದಿ; ತುದಿಯಲೆಲ್ಲೋ ನಾವು
ಮುಂದೆ ನಿಂದವಳ ಮುಡಿಯ ಮಲ್ಲಿಗೆಯ ಪರಿಮಳವು
ಎನ್ನ ನಾಸಿಕಗೀಗ ಇಷ್ಟ ಇಷ್ಟ.

ನನ್ನ ಸಂಭ್ರಮಕಂತು ಪಾರವೇ ಇಲ್ಲ;
ಏಕೆ ಗೊತ್ತೆ? ಕಾಯ್ವೊಡೆದು ಬೇಡ್ವಾಗ
ನಸು ನಕ್ಕಿಹಳು ದೇವಿ ಹರಸುತ್ತ:
'ಮುಂದಿನ ವರ್ಷವೇ ಮದುವೆ; ಚಿಂತೆ ಬೇಡ' -ಎಂದು!

ಗದ್ದಲದ ಜಂಗುಳಿಯಲೂ ಇಬ್ಬರೇ ನಾವೀಗ
ಮಾರು ದೂರದ ಬಳಿಕ ಕೈ-ಕೈ ಬೆಸೆದು;
ಭಯವೆಲ್ಲ ದೂರಾಗಿ, ಮನವೆಲ್ಲ ಹಾಯಾಗಿ
ಜಾತ್ರೆಗೇ ಹೊಸ ಕಳೆಯು ಪ್ರಾಪ್ತವಾಗಿರಲು

ಚೆನ್ನಯ್ಯಗಂತೂ ಕರುಣೆಯೇ ಇಲ್ಲ ಸೈ,
ತೊಡಿಸುತಿರುವನಲ್ಲ ಬಳೆ, ನೋಯುತಿದ್ದರು ಇವಳ ಕೈ!
'ಯಾಕೆ ಬೇಕಿತ್ತೋ ನಿನಗಾದರು?' ಎಂದು ನಾ ಮುನಿದರೆ,
ಇವಳು, 'ನಿಮಗದೆಲ್ಲ ತಿಳಿಯದು' ಎನ್ವಳಲ್ಲ!

ಜಾತ್ರೆಯಾ ಗದ್ದಲದಿ ಈ ಬಳೆಯ ದನಿಯೀಗ
ತನ್ನದೇ ಸ್ವರಪಥದಿ ತೇಲುತಿಹುದು;
ಅಲ್ಲಿ ತೊಟ್ಟಿಲ ಮೇಲೆ, ಅಗೋ ದೋಣಿಯ ಮೇಲೆ
ಈ ಜೋಡಿ ಸಂಭ್ರಮದಿ ಪಾಲ್ಗೊಳ್ಳುತಿಹುದು.

[ಸಾಗರದಲ್ಲಿ ಜಾತ್ರೆ ನಡೆಯುತ್ತಿದೆ. ನನಗೆ ಹೋಗಲಾಗುತ್ತಿಲ್ಲ. :(]

Thursday, February 21, 2008

ಅಮ್ಮ ಬಂದಿದ್ದಳು..

ಅಮ್ಮ ಬಂದಿದ್ದಳು.

ಮಗನ ಪುಸ್ತಕ ಬಿಡುಗಡೆಯಾಗುತ್ತಿರುವುದು ಒಂದು ನೆಪವಾಗಿತ್ತಷ್ಟೇ. ಆದರೆ ಅವಳು ನಿಜವಾಗಿಯೂ ಬಂದದ್ದು ಬೆಂಗಳೂರು ನೋಡುವುದಕ್ಕೆ. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳೇ ಕಳೆದುಹೋಗಿದ್ದವು. ಮೊದಲೆರಡು ವರ್ಷ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ, ಇಲ್ಲಿ ಸೆಟಲ್ ಆಗಲಿಕ್ಕೇ ವ್ಯಯವಾಗಿಹೋಯಿತು. ಕಳೆದ ಒಂದು-ಒಂದೂ ವರೆ ವರ್ಷದಿಂದ ನಾನು ಅಮ್ಮನನ್ನು ಬೆಂಗಳೂರಿಗೆ ಬರುವಂತೆ ತುಂಬಾ ತುಂಬಾ ಕರೆಯುತ್ತಿದ್ದೆ. ಆದರೆ ಅವಳು ಮಳೆಗಾಲ, ಸುಗ್ಗಿ, ಅಜ್ಜಂಗೆ ಹುಷಾರಿಲ್ಲೆ, ಇತ್ಯಾದಿ ಏನೇನೋ ಕಾರಣವೊಡ್ಡಿ ಬರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮುಂದಿನ ಬಾರಿ ಊರಿಗೆ ಹೋದಾಗ ಏನಾದರಾಗಲಿ, ಅಮ್ಮನನ್ನು ಕರೆದುಕೊಂಡೇ ಬರುವುದು ಅಂತಲೂ ಪ್ಲಾನ್ ಮಾಡಿದ್ದೆ. ಈ ಮಧ್ಯೆ ಪದೇ ಪದೇ ಮುಂದೂಡಲ್ಪಡುತ್ತಿದ್ದ ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅಂತೂ ಫೆಬ್ರುವರಿ ಹತ್ತಕ್ಕೆ ಖಾಯಂ ಎಂದಾದಾಗ ನಾನು ಮನೆಗೆ ಫೋನ್ ಮಾಡಿದೆ. ಮೊದಲು ಅಪ್ಪ ತಾನೇ ಬರುವುದಾಗಿ ಹೇಳಿದ. ಆಮೇಲೆ ಬಹುಶಃ ಏನೇನೋ ಮಾಡಿ ಅಮ್ಮನಿಗೆ ಧೈರ್ಯ ತುಂಬಿ ಒಪ್ಪಿಸಿದ್ದಾನೆ. ನನ್ನ ಅಜ್ಜನ ಮನೆಯ ಊರಿನವರೊಬ್ಬರು ಬುಧವಾರ ರಾತ್ರಿ ಬೆಂಗಳೂರಿಗೆ ಹೊರಡುವವರಿದ್ದಾರೆ ಎಂಬ ಸುದ್ಧಿಯನ್ನು ಸಂಗ್ರಹಿಸಿದ್ದಾರೆ. ಅವರ ಜೊತೆಯೇ ಅಮ್ಮನೂ ಹೊರಡುವುದು ಎಂದು ತೀರ್ಮಾನವಾಗಿದೆ. ಆವೊತ್ತು ರಾತ್ರಿ ಅಮ್ಮ ಫೋನ್ ಮಾಡಿ ತಾನೇ ಬರುತ್ತಿರುವುದಾಗಿ ಘೋಷಿಸಿಬಿಟ್ಟಳು! ನನಗಾದ ಸಂಭ್ರಮ ಅಷ್ಟಿಷ್ಟಲ್ಲ.

ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!

ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ನನ್ನ ಮೊಬೈಲು ರಿಂಗಾಯಿತು. ಹೊದಿಕೆಯೊಳಗೆಲ್ಲೋ ಹುದುಗಿದ್ದ ಕೈ ಹೊರಬಂದು ಶಬ್ದವನ್ನರಸಿ ಮೊಬೈಲನ್ನು ಹಿಡಿದು ಕಿವಿಯ ಬಳಿ ತಂದು ಆನ್ಸರ್ ಬಟನ್ನನ್ನು ಒತ್ತಿತು. "ಅಪ್ಪೀ, ನಾ ಬಂದು ಮುಟ್ಟಿದಿ! ಮೆಜೆಸ್ಟಿಕ್ಕಲ್ಲಿ ಅಮರ್ ಹೋಟ್ಲ್ ಹತ್ರ ಇದ್ದಿ. ಬರ್ತ್ಯಾ?" ಅಮ್ಮ! ನನ್ನ ಅಮ್ಮ! ಇಲ್ಲೇ, ಬಳಿಯ ಮೆಜೆಸ್ಟಿಕ್ಕಿನಿಂದ ಮಾತಾಡುತ್ತಿದ್ದಾಳೆ! ನಾನು ಹೌಹಾರಿ ಎದ್ದೆ. ದಡದಡನೆ ಹಾಸಿಗೆಯನ್ನು ಮಡಿಚಿಟ್ಟು, ಮುಖಕ್ಕೆ ನೀರು ಚುಮುಕಿಸಿಕೊಂಡು, ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ... ಮುಂಜಾನೆಯ ಗಾಳಿಯನ್ನು ಸುಯ್ಯನೆ ಸೀಳಿಕೊಂಡು ಓಡುತ್ತಿತ್ತು ಬೈಕು.. ಹತ್ತೇ ನಿಮಿಷದಲ್ಲಿ ಮೆಜೆಸ್ಟಿಕ್ಕಿನಲ್ಲಿದ್ದೆ. ಬೈಕು ಪಾರ್ಕ್ ಮಾಡಿ ಅಮರ್ ಹೋಟೆಲ್ ಬಳಿ ಬಂದರೆ ಅಲ್ಲಿ ನಿಂತಿದ್ದಳು ಅಮ್ಮ.. ನನ್ನ ಅಮ್ಮ.. ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು. ನನ್ನ ಮುಖ ಕಾಣುತ್ತಿದ್ದಂತೆಯೇ "ಅದೇ! ಅಪ್ಪಿ ಬಂದ!" ಅಂತ ತನ್ನ ಪಕ್ಕದಲ್ಲಿದ್ದ ತವರೂರಿನ ಮಾಬ್ಲೇಶ್ವರಣ್ಣನಿಗೆ ತೋರಿಸಿದಳು. ನಾನು ಅಮ್ಮನ ಬಳಿ ಹೋದೆ. "ಬಸ್ಸಲ್ಲಿ ನಿದ್ದೆ ಬಂತಾ ಅಮಾ?" ಕೇಳಿದೆ. "ನಿದ್ಯಾ? ಒಂದು ನಿಮ್ಷ ಕಣ್ಮುಚ್ಚಿದ್ಲಾ ಕೇಳು ಅವ್ಳುನ್ನ! ಹೊಟ್ಟೆ ತೊಳುಸ್ತಿತ್ತಡ.. ರಾತ್ರಿಡೀ ಕಿಟಕಿ ಹೊರಗೆ ನೋಡ್ಕ್ಯೋತ್ ಕೂತಿದ್ದ. ನೀನು ವಾಪಾಸ್ ಹೋಗಕ್ಕರೆ ಬಲಬದಿ ಸೀಟಲ್ಲೆ ಕೂರ್‍ಸಿ ಕಳ್ಸು. ಈಗ ಹೆಂಗರು ಈ ಕಡೆ ಸೈಡ್ ಪೂರ್ತಿ ನೋಡ್‍ಕೈಂದ. ವಾಪಸ್ ಹೋಗಕ್ಕರೆ ಆ ಕಡೆನು ನೋಡ್ಲಿ!" ಮಾಬ್ಲೇಶ್ವರಣ್ಣ ಹೇಳಿದ. ನಾನು ಜೋರಾಗಿ ನಕ್ಕೆ. ಮೇಷ್ಟ್ರು, ಮನೆಯವರ ಬಳಿ ಕಂಪ್ಲೇಂಟ್ ಮಾಡುವಾಗ ಪಕ್ಕದಲ್ಲಿ ತಲೆ ತಗ್ಗಿಸಿ ನಿಂತಿರುವ ಶಾಲಾಬಾಲಕನಂತೆ ಅಮ್ಮ ಪೆಚ್ಚಾಗಿ ನಿಂತಿದ್ದಳು.

ಮಹಾಬಲೇಶ್ವರಣ್ಣನಿಗೆ ಥ್ಯಾಂಕ್ಸ್ ಹೇಳಿ, ವಾಪಸು ಹೋಗುವುದರೊಳಗೆ ನಮ್ಮನೆಗೊಮ್ಮೆ ಬಂದು ಹೋಗುವಂತೆ ಕರೆದು, ಅಮ್ಮನ ದೊಡ್ಡ-ವಜ್ಜೆ ಏರ್‌ಬ್ಯಾಗನ್ನು ತೆಗೆದುಕೊಂಡೆ. ಅಮ್ಮ ನನ್ನ ಹಿಂದೆಯೇ ಬಂದಳು. ನನ್ನ ಹೊಸ ಬೈಕು ಹತ್ತುವಾಗ "ಇದು ಅಪ್ಪನ್ ಬೈಕ್ ತರ ಇಲ್ಲೆ, ಸಿಕ್ಕಾಪಟ್ಟೆ ಎತ್ತರ" ಎಂದಳು. ಲೇಡೀಸ್ ಹ್ಯಾಂಡ್ ಇಲ್ಲದ್ದರಿಂದ ಎಲ್ಲಿ ಹಿಡಕೊಳ್ಳುವುದು ಅಂತ ಗೊಂದಲಕ್ಕೆ ಬಿದ್ದಳು. ನನ್ನ ಹೆಗಲನ್ನೆ ಹಿಡಕೋ ಎಂದೆ. "ನಿಧಾನ ಓಡ್ಸು" ಎಂದಳು. ಬ್ಯಾಗನ್ನು ಪೆಟ್ರೋಲ್ ಟ್ಯಾಂಕಿನ ಮೇಲಿಟ್ಟುಕೊಂಡು ನಿಧಾನವಾಗಿ ಹೊರಟರೆ ಇನ್ನೂ ಶುರುವೇ ಆಗದಿದ್ದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬೈಕು ಓಡುವಾಗ ಅಮ್ಮ ಹಿಂದೆ ಕಣ್ಮುಚ್ಚಿ ಕೂತಿದ್ದಳು.

ಅಮ್ಮನಿಗೆ ಮನೆ ತೋರಿಸಿದೆ. ಕಾಯ್ಲ್ ಹಾಕಿ ನೀರು ಕಾಯಿಸುವುದನ್ನು ಹೇಳಿಕೊಟ್ಟೆ. ಕಾಫಿಪುಡಿ ಯಾವ ಡಬ್ಬಿಯಲ್ಲಿದೆ ಎಂದು ತೋರಿಸಿಕೊಟ್ಟೆ. ಈಳಿಗೆ ಮಣೆ ಇಲ್ಲದೆ ಚಾಕುವಿನಲ್ಲಿ ತರಕಾರಿ ಹೆಚ್ಚಲು ಹೆದರಿದ್ದಕ್ಕೆ ನಾನೇ ಹೆಚ್ಚಿಕೊಟ್ಟೆ. ಅಮ್ಮ ಊರಿಂದ ಕೊಬ್ರಿ ಮಿಠಾಯಿ ಮಾಡಿಕೊಂಡು ಬಂದಿದ್ದಳು. ನೆಲ್ಲಿಸಟ್ಟು ತಂದಿದ್ದಳು. ಹಲಸಿನ ಹಪ್ಪಳ ತಂದಿದ್ದಳು. 'ಓಹೋ! ಮಗನ ಮನೇಲಿ ಅಡುಗೆ-ಗಿಡುಗೆ ಮಾಡಿಕೊಂಡು ಹದಿನೈದು ದಿನ ಇದ್ದು ಹೋಗಿ..' ಎಂದ ಓನರ್ರಿಗೆ 'ಇಲ್ಲ, ನಮ್ಮ ಮಾವನವ್ರಿಗೆ ಅರಾಮಿರಲ್ಲ.. ಒಂದು ವಾರ ಅಷ್ಟೇ. ಹೋಗ್ಬೇಕು ಊರಿಗೆ' ಎಂದಳು ಅಮ್ಮ.

ಪುಸ್ತಕ ಬಿಡುಗಡೆಯಲ್ಲಿ ನಾನು ಮಾತಾಡಿದ್ದು ನೋಡಿ ಅಮ್ಮ ಖುಷಿಯಾಗಿದ್ದಳು. ಮನೆಗೆ ಫೋನ್ ಮಾಡಿದ್ದಾಗ ಅಪ್ಪನ ಬಳಿ 'ಅಪ್ಪಿ ಚನಾಗ್ ಮಾತಾಡಿದ.. ನಾ ಅಂವ ಮಾತಾಡಿದ್ದೇ ನೋಡಿರ್ಲೆ' ಅಂದಳು. ಅಮ್ಮನನ್ನು ಬೆಂಗಳೂರಿನ ನೆಂಟರ ಮನೆಗಳಿಗೆ ಕರೆದೊಯ್ದೆ. ಸಿಗ್ನಲ್ಲುಗಳಲ್ಲಿ ರಸ್ತೆ ದಾಟುವುದು ಹೇಗೆ ಎಂದು ಹೇಳಿಕೊಟ್ಟೆ. ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. ಮೆಜೆಸ್ಟಿಕ್ಕಿನ ಫ್ಲೈಓವರ್ರಿನ ಮೇಲ್ಗಡೆ ನಿಲ್ಲಿಸಿಕೊಂಡು 'ಈ ಕಡೆ ಸಿಟಿ ಬಸ್‍ಸ್ಟ್ಯಾಂಡು, ಆ ಕಡೆ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡು, ಹೀಗೇ ಹೋದ್ರೆ ರೈಲ್ವೇ ಸ್ಟೇಶನ್ನು, ಆ ಕಡೆ ಗಾಂಧಿನಗರ' ಅಂತ ತೋರಿಸಿದೆ. ಸಿಗ್ಮಾ ಮಾಲ್‍ಗೆ ಕರೆದುಕೊಂಡು ಹೋಗಿ ಎಸ್ಕಲೇಟರ್ ಬಳಿ ಹೋಗಿ ನಿಂತರೆ ಹೆದರಿಕೊಂಡು ನಿಂತುಬಿಟ್ಟಳು. ಹತ್ತೋದೇ ಇಲ್ಲ ಎಂದಳು. ಕೈ ಹಿಡಿದುಕೊಂಡು 'ನೋಡೂ, ಹೀಗೆ ಮೆಟ್ಲು ಬರ್ತಿದ್ದಂಗೆ ಎರಡೂ ಹೆಜ್ಜೆನೂ ಇಟ್ಬಿಡು, ತಂತಾನೇ ಮೇಲೆ ಹೋಗ್ತು.. ಹೆದ್ರಡ' ಎಂದೆ. ಮೆಟ್ಟಿಲು ಮೇಲೇರುತ್ತಿದ್ದಾಗ ಅವಳ ಎದೆ ಡವಗುಟ್ಟುತ್ತಿದ್ದುದು ನಡುಗುತ್ತಿದ್ದ ಕೈಯಿಂದಲೇ ಗೊತ್ತಾಗುತ್ತಿತ್ತು. ಬಿಗ್ ಬಜಾರಿನಲ್ಲಿ ಶಾಪಿಂಗ್ ಮಾಡೋದು ಎಂದರೆ ಹೇಗೆ ಅಂತ ತೋರಿಸಿದೆ. 'ಶೆಟ್ರ್ ಅಂಗಡೀಲಿ ಪಟ್ಟಿ ಹಿಡ್ಕಂಡ್ ಸಾಮಾನ್ ಹಾಕ್ಸೋ ರಗಳೇನೆ ಇಲ್ಲೆ.. ನಮ್ಗೇನು ಬೇಕೋ ಎಲ್ಲ ಈ ಗಾಡಿಲಿ ಇಟ್ಕಂಡು ಹೋಗಿ ಲಾಸ್ಟಿಗೆ ಬಿಲ್ ಮಾಡ್ಸಿದ್ರೆ ಆತು.. ದುಡ್ ಕೊಡೋದೂ ಬ್ಯಾಡ; ಕಾರ್ಡ್ ಕೊಟ್ರೆ ಸಾಕು' ಎಂದೆ.

ಪುಟ್ಟ ತಳ್ಳುಗಾಡಿಯಂತಹ ಅಂಗಡಿಯಲ್ಲಿ ಟೋಪಿ ಹಾಕಿಕೊಂಡವನೊಬ್ಬ ಏನೋ ಮಾರುತ್ತಿದ್ದುದನ್ನು ನೋಡಿ 'ಅದೇನು?' ಅಂದಳು. 'ಅದು ಸ್ವೀಟ್ ಕಾರ್ನ್' ಎಂದು ಹೇಳಿ, ಒಂದು ರೆಗ್ಯುಲರ್ ಕಪ್ ತಗೊಂಡು ತಿನ್ನಿಸಿದೆ. 'ಇಷ್ಟು ಸಣ್ಣ ಲೋಟಕ್ಕೆ ನಲ್ವತ್ತು ರೂಪಾಯಿಯಾ? ಎಂಥಿದ್ದು ಇದ್ರಲ್ಲಿ? ಸುಮ್ನೆ ದುಡ್ ದಂಡ' ಎಂದಳು. ಗುಂಡಿ ಒತ್ತಿ ಲಿಫ್ಟ್‍ಗೆ ಕಾಯತೊಡಗಿದೆ. ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು.

ಅಮ್ಮನ ಕಣ್ಗಳೊಳಗೆ ವಿಧಾನಸೌಧ ಪ್ರತಿಫಲಿಸುತ್ತಿದ್ದಾಗ 'ಇಲ್ಲೇ ನೋಡು.. ನಮ್ಮ ಮಂತ್ರಿಗಳೆಲ್ಲ ಕೂತು ದಾದಾಗಿರಿ ಮಾಡೋದು' ಎಂದು ನಕ್ಕೆ. ಅಕ್ಕಪಕ್ಕದವರೆಲ್ಲ ನಮ್ಮನ್ನೇ ನೋಡಿದರು. ಆಮೇಲವಳನ್ನು ಕರೆದುಕೊಂಡು ಹೈಕೋರ್ಟಿನ ಕೆಂಪು ತೋರಿಸುತ್ತಾ ಕಬ್ಬನ್ ಪಾರ್ಕಿನ ಹಸಿರಿನೊಳಗೆ ನುಗ್ಗಿದೆ. 'ಇಲ್ಲೆಂತ ಮರಗಿಡ ನೋಡದು! ನಮ್ಮೂರ್ ಕಾಡು ಇದ್ರಕಿಂತ ಎಷ್ಟೋ ಚೊಲೋ ಇದ್ದು. ನೆಡಿ ಹೋಪನ!' ಎಂದಳು. ಇದ್ದುದರಲ್ಲೇ ಲಾಲ್‍ಭಾಗಿನ ಹೂಗಿಡಗಳು ಅವಳಿಗೆ ಇಷ್ಟವಾಯಿತು. ಗುಲಾಬಿ ತೋಟ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಳು. ಯಾವುದೋ ಹೂವು ನೋಡುತ್ತ 'ಇದ್ರದ್ದೊಂದು ಹೆರೆ ಕೊಡ್ತಿದ್ವೇನ.. ನಮ್ಮನೆ ಅಂಗಳದಲ್ಲಿ ಇಲ್ಲೇ ಇಲ್ಲೆ ಈ ಥರದ್ದು' ಎಂದಳು. ಒಳ್ಳೆಯದೊಂದು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿದೆ. ಫಿಂಗರ್ ಬೌಲ್‍ನಲ್ಲಿ ಕೈ ತೊಳೆದದ್ದು ಸರಿಯಾಗದೆ ವಾಶ್ ಬೇಸಿನ್ ಬಳಿ ಹೋದಳು. ಅದೇ ಸಂದರ್ಭದಲ್ಲಿ ನಾನು ಅವಳಿಗೆ ಕಾಣದಂತೆ ಬಿಲ್ ದುಡ್ಡು ಕೊಟ್ಟೆ. ಬೆಂಗಳೂರಿನ ಟ್ರಾಫಿಕ್ಕಿಗಾದರೂ ಅವಳು ಹೆದರಿದಳೋ ಇಲ್ಲವೋ, ಆದರೆ ಇಸ್ಕಾನಿನ ಬಂಗಾರದ ಶೋಕೇಸಿನೊಳಗಿನ ಕೃಷ್ಣಾರಾಧೆಯರೆದುರು ಮಾತ್ರ ಅಮ್ಮ ಕೈಮುಗಿಯುವುದನ್ನೂ ಮರೆತು ಸುಮ್ಮನೆ ನೋಡುತ್ತ ನಿಂತುಬಿಟ್ಟಳು. ನನಗಂತೂ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ'ದ ಅಮ್ಮನೇ ನನ್ನ ಅಮ್ಮನಲ್ಲಿ ಕಾಣುತ್ತಿದ್ದಳು. ಎಲ್ಲ ಅಮ್ಮಂದಿರೂ ಹೀಗೇನೇನೋ ಅಂದುಕೊಂಡೆ.

ಒಂದು ದಿನ ಮಾತ್ರ ಅಮ್ಮನನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಆಫೀಸಿಗೆ ಹೋಗಿದ್ದೆ. ವಾಪಸು ಬರುವ ಹೊತ್ತಿಗೆ, ನನ್ನ ತೊಳೆಯಬೇಕಿದ್ದ ಬಟ್ಟೆಗಳನ್ನೆಲ್ಲ ತೊಳೆದುಹಾಕಿ, ಸಾಂಬಾರು ಬಟ್ಟಲಿನ ಖಾಲಿ ಹೊಡೆಯುತ್ತಿದ್ದ ಕುಳಿಗಳೊಳಗೆ ಎಲ್ಲವನ್ನೂ ಮಟ್ಟಸವಾಗಿ ತುಂಬಿಸಿಟ್ಟು, ನನ್ನ ಬಾಚಣಿಗೆಯಲ್ಲಿ ಸಿಕ್ಕಿಕೊಂಡಿದ್ದ ಕಸವನ್ನೆಲ್ಲ ಚೊಕ್ಕ ಮಾಡುತ್ತ ಕೂತಿದ್ದಳು. 'ಅಮ್ಮಾ ಎಂಥಕಮ್ಮ ಇದ್ನೆಲ್ಲ ಮಾಡಕ್ ಹೋದೆ.. ಒಂದು ದಿನ ಆರಾಮಾಗಿ ಮನೇಲಿರು ಅಂತ ಬಿಟ್ಟಿಕ್ ಹೋಗಿದ್ದಲ್ದಾ?' ಎಂದು ನಾನು ಸಿಡಿಗುಟ್ಟಿದರೆ, 'ಮನೇಲಿ ಸುಮ್ನೆ ಕೂತ್ಕಂಡು ಎಂಥ ಮಾಡ್ಲಾ ನಾನು? ಬೇಜಾರ್ ಬಂದುಹೋಗ್ತು.. ಊರಲ್ಲಾದ್ರೆ ಅಡಕೆ ಸುಲಿಯಕ್ಕೆ ಹೋಗ್ಲಕ್ಕು, ತೋಟಕ್ ಹೋಗಿ ಬರ್ಲಕ್ಕು, ಹಿತ್ಲಿಗೆ ಹೋಗಿ ಗೇರ್‌ಪೀಠ ಹೆಕ್ಲಕ್ಕು, ಕೊಟ್ಟಿಗೆ ಕೆಲಸ ಇರ್ತು.... ಇಲ್ಲಿ ಎಂತೆಂತು ಕೆಲ್ಸಿಲ್ಲೆ! ಅಕ್ಕಪಕ್ಕದ ಮನೆಯವ್ರು ಯಾರಾದ್ರೂ ಮಾತಾಡಕ್ಕೆ ಬರ್ತ್ವನ ಅಂದ್ರೆ ಅದೂ ಇಲ್ಲೆ.. ಇದೆಂಥ ಬೆಂಗ್ಳೂರೇನ!' ಎಂದಳು ಅಮ್ಮ. 'ಅದ್ಕೇನಮ್ಮ, ಇಲ್ಲಿ ಹೆಂಗಸ್ರು ಗಂಡಸ್ರು ಎಲ್ಲಾ ಕೆಲಸಕ್ಕೆ ಹೋಗ್ತ' ಎಂದೆ. 'ಹೂಂ, ಹೌದಪ್ಪಾ.. ನೀನೂ ಕೆಲ್ಸಕ್ಕೆ ಹೋಗೋ ಹುಡುಗೀನೇ ಮದುವೆ ಮಾಡ್ಕ್ಯ! ಅದಿಲ್ಲೇಂದ್ರೆ ನನ್ ಸೊಸಿಗೆ ಮನೇಲ್ ಕೂತ್ಗಂಡು ಹುಚ್ ಹಿಡಿತು ಅಷ್ಟೇ!' ಎಂದಳು. ಅಷ್ಟೊತ್ತಿಗೆ ಮೊಬೈಲು ಪೀಂಗುಟ್ಟಿತು. 'ಅತ್ಗೇನ ಅಮ್ಮಂಗೆ ಪರಿಚಯ ಮಾಡ್ಸಿಕೊಟ್ಯಾ?' ಅಂತ ಮಧು ಎಸ್ಸೆಮ್ಮೆಸ್ ಮಾಡಿದ್ದ. ಸುಮ್ನೇ ಒಂದು ಸ್ಮೈಲೀ ಹಾಕಿ ರಿಪ್ಲೇ ಮಾಡಿದೆ.

ಚಿಕ್ಕಪೇಟೆಯ ಸ್ಯಾರಿ ಸೆಂಟರೊಂದಕ್ಕೆ ಕರೆದೊಯ್ದು ಅಮ್ಮನಿಗೆ ಸೀರೆ ಕೊಡಿಸಿದೆ. 'ಅದು ಚನಾಗಿಲ್ಲೆ, ಇದು ಚನಾಗಿಲ್ಲೆ, ಇದ್ನ ತಗಂಡ್ ಹೋದ್ರೆ ವೀಣತ್ತೆ ಎಂತ ಹೇಳ್ತ್ಲೇನ, ಮಡಿ ಸೀರೆ ಥರ ಕಾಣ್ತು ಅನ್ಸ್ತು, ಇದು ಪ್ಯೂರ್ ರೇಶ್ಮೆ ಹೌದಾ ಅಲ್ದಾ, ಇಷ್ಟೆಲ್ಲ ರೇಟ್ ಕೊಟ್ಟು ಇಲ್ಲಿ ತಗಳಕ್ಕಿಂತ ಸಾಗರದಲ್ಲಿ ತಗಂಡ್ರ್‍ಏ ಚೀಪಾಗ್ತು' ಎಂದೇನೇನೋ ಗೊಣಗುತ್ತಲೇ ಅಂತೂ ಅಮ್ಮ ಒಂದು ಸೀರೆ ಕೊಂಡಳು. ಮನೆಗೆ ಬಂದಮೇಲೂ ಅದನ್ನು ನಾಕ್ನಾಕು ಬಾರಿ ತೆರೆದು ನೋಡಿ ಸವರಿ 'ಚನಾಗಿದ್ದು ಅಲ್ದನಾ?' ಎಂದು ಕೇಳಿದಳು. 'ಹೈಕ್ಲಾಸ್ ಇದ್ದು ಬಿಡು ಚಿಕ್ಕೀ' ಎಂದು ನನ್ನ ರೂಂಮೇಟೂ ಶಿಫಾರಸು ಮಾಡಿದಮೇಲೇ ಅವಳಿಗೆ ಸ್ವಲ್ಪ ಸಮಾಧಾನ ಆಗಿದ್ದು!

ಅಮ್ಮನನ್ನು ವಾಪಸು ಕಳುಹಿಸಿಕೊಡಲಿಕ್ಕೆ ನನ್ನ ಮನಸಿನ್ನೂ ತಯಾರಾಗಿರಲೇ ಇಲ್ಲ. ಆದರೆ ಆಗಲೇ ವಾರವಾಗಿಬಿಟ್ಟಿತ್ತು. ಅಜ್ಜನನ್ನು ನೋಡಿಕೊಳ್ಳುವುದಕ್ಕೆ ಮತ್ತು ಅಡುಗೆ ಮಾಡಿ ಹಾಕಲಿಕ್ಕೆಂದು ಮನೆಗೆ ಬಂದಿದ್ದ ವೀಣತ್ತೆ ತಾನು ನಾಳೆ ವಾಪಸು ಹೋಗುತ್ತಿರುವುದಾಗಿ ಹೇಳಿದಳು ಫೋನಿನಲ್ಲಿ. ಅಮ್ಮ ಇವತ್ತು ರಾತ್ರಿ ಹೊರಡಲೇಬೇಕಿತ್ತು. ಗಜಾನನ ಬಸ್ಸು ಬಂದು, ಏರ್‌ಬ್ಯಾಗನ್ನು ಡಿಕ್ಕಿಯಲ್ಲಿರಿಸಿ, ಅಮ್ಮನನ್ನು ಹತ್ತಿಸಿ, ಪುಶ್‍ಬ್ಯಾಕ್ ಸೀಟನ್ನು ಹಿಂದೆ ಮಾಡಿಕೊಟ್ಟು ಕೂರಿಸಿ, ವಾಂತಿ ಬಂದರೆ ಕವರಿನಲ್ಲಿಯೇ ಮಾಡುವಂತೆ ಹೇಳಿ, ಹೋಗ್ಬಾ ಎಂದು ನಾನು ಕೆಳಗಿಳಿದೆ. ಬಸ್ಸು ಹೊರಟು ನಾನು ಕೈ ಬೀಸುವಾಗ ಯಾವ್ಯಾವುದೋ ಸಿನೆಮಾಗಳ ಇಂಥದೇ ಸೀನುಗಳೆಲ್ಲ ಕಣ್ಮುಂದೆ ಬಂದು ನಿಂತಿದ್ದವು. ಆದರೆ ಕಣ್ಣು ತುಂಬಿಕೊಂಡಿದ್ದರಿಂದ ಅವು ಸರಿಯಾಗಿ ಕಾಣುತ್ತಿರಲಿಲ್ಲ.

ಬೆಳಗ್ಗೆ ಎಂಟೂವರೆಗೆ ಮನೆಗೆ ಫೋನ್ ಮಾಡಿದರೆ ಅಜ್ಜ ಎತ್ತಿಕೊಂಡು 'ಅಪ್ಪ ಕರ್ಕಂಬರಕ್ಕೆ ಬಸ್‍ಸ್ಟ್ಯಾಂಡಿಗೆ ಹೋಯ್ದ.. ಈಗ ಹೋತು ಕಾಣ್ತು ಪಾಳಾ ಬಸ್ಸು.. ಅದೇ ಅಲ್ಲಿ ಡಾಕ್ಟ್ರು ಮನೆ ಹತ್ರ ಬರ್ತಾ ಇದ್ದಂಗೆ ಕಾಣ್ತಪ' ಎಂದ. ಏರ್‌ಬ್ಯಾಗ್ ಹಿಡಿದ ಅಪ್ಪನ ಪಕ್ಕ ಅಮ್ಮ ನಿಧಾನವಾಗಿ ನಡೆದುಕೊಂಡು, ಎದುರಿಗೆ ಸಿಕ್ಕಿ 'ಓಹೋಹೋಹೋ! ಬೆಂಗ್ಳೂರಿಗ್ ಹೋಗ್ಬಂದಾತಾ ಸವಾರಿ?' ಎಂದು ಕೇಳಿರಬಹುದಾದ ಸರೋಜಕ್ಕನಿಗೆ ಬೆಂಗಳೂರಿನ ಕಥೆಯನ್ನೆಲ್ಲ ಹೇಳುತ್ತ, ಆಮೇಲೆ ರತ್ನಾವತಿ ಚಿಕ್ಕಿ ಒತ್ತಾಯ ಮಾಡಿದಳು ಅಂತ ಹಾಗೇ ಅವಳ ಮನೆ ಹೊಕ್ಕು ಮಗ ಕೊಡಿಸಿದ ರೇಶ್ಮೆ ಸೀರೆ ತೋರಿಸಿ, ಚಂದ್ರಕ್ಕನ ಮನೆ ಹುಡುಗ್ರಿಗೆ ಸ್ವೀಟ್ಸ್ ಕೊಟ್ಟು... ಎಲ್ಲಾ ಮಾಡಿಕೊಂಡು ಅಮ್ಮ ಮನೆ ಮುಟ್ಟುವ ಹೊತ್ತಿಗೆ ಇನ್ನೂ ಅರ್ಧ ತಾಸಾದರೂ ಬೇಕು ಬಿಡು ಎಂದುಕೊಳ್ಳುತ್ತಾ 'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು' ಎಂದು ಅಜ್ಜನಿಗೆ ಹೇಳಿ ಫೋನಿಟ್ಟೆ. ಆಫೀಸಿಗೆ ಹೊರಡಲು ತಯಾರಾಗತೊಡಗಿದೆ. ಮನೆ ಮತ್ತು ಮನ ಎರಡೂ ಬಿಕೋ ಎನ್ನುತ್ತಿದ್ದವು.

Monday, February 11, 2008

ನನಸಾದ ಕನಸುಗಳ ಪಟ್ಟಿಗೆ 'ಚಿತ್ರಚಾಪ'

ತೀರಾ ಎಂದಿನಂತೇನಿರಲಿಲ್ಲ ನಿನ್ನೆ ದಿನ. ಆರೂ ವರೆಗೆ ಅಲಾರ್ಮ್ ಕೂಗಿತು; ಕಾಯ್ಲ್ ಬಕೇಟಿನಲ್ಲಿದ್ದ ನೀರನ್ನು ಕಾಯಿಸಿತು; ಊರಿಂದ ಬಂದಿದ್ದ ಅಮ್ಮ ತಿಂಡಿ ಮಾಡಿಕೊಟ್ಟಳು; ಕುರ್ತಾದ ಕಂಕುಳಿಗೆ ಡಿಯೋಡರೆಂಟ್ ಸ್ಪ್ರೇ ಆಯಿತು; ಸ್ವಿಚ್ ಒತ್ತಿದ್ದಕ್ಕೇ ಗಾಡಿ ಸ್ಟಾರ್ಟ್ ಆಯಿತು; ಮುಕ್ಕಾಲು ಗಂಟೆಯ ನಂತರ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಣ್ಣೆದುರಿಗಿತ್ತು!

ಎಷ್ಟು ಬಾರಿ ಹೋಗಿಲ್ಲ ಅಲ್ಲಿಗೆ? ಯಾರ್ಯಾರದೋ ಪುಸ್ತಕ ಬಿಡುಗಡೆಗಳು, ಏನೋ ಘೋಷ್ಠಿ, ಮತ್ತೇನೋ ಸಂಗೀತ ಕಛೇರಿ... ಆಗೆಲ್ಲ ತಲೆಬಾಗಿಲಲ್ಲಿ ನಿಂತು ಯಾರೋ ನನ್ನನ್ನು 'ಬನ್ನಿ ಸಾರ್..' ಎನ್ನುತ್ತಾ ಮುಗುಳ್ನಗೆಯೊಂದಿಗೆ ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ಹಾಗಲ್ಲ... ಇವತ್ತು ನಮ್ಮದೇ ಪುಸ್ತಕ ಬಿಡುಗಡೆ! ನಾವೇ ನಿಂತು ಸ್ವಾಗತಿಸಬೇಕು ಜನರನ್ನು! ಆಹ್!


ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು ಅಂತ ಎಲ್ಲರೂ ಹೇಳಿದರು. ನಿಮ್ಮಲ್ಲನೇಕರು ಬಂದಿದ್ದಿರಿ.. ಬರಲಿಕ್ಕಾಗದವರು ಶುಭಾಶಯ ಹೇಳಿದ್ದೀರಿ.. ಖುಷಿಯಾಯ್ತು ... ... ಇಷ್ಟೇ ಹೇಳಲಿಕ್ಕೆ ಸಾಧ್ಯವಾಗುತ್ತಿರುವುದು ನನಗೆ ಸಧ್ಯ. ಉಳಿದಿದ್ದನ್ನೆಲ್ಲ ಈ ಫೋಟೋಗಳು ಹೇಳುತ್ತಿವೆ. ಥ್ಯಾಂಕ್ಸ್.. ಥ್ಯಾಂಕ್ಸ್ ಒನ್ಸ್ ಅಗೇನ್!




ಥ್ಯಾಂಕ್ಸ್!